ಇವರು ಯಾರು ಬಲ್ಲಿರೇನು?

ಲೇಖಕರೊಬ್ಬರ ಕೃತಿಯೊಂದಿಗೆ ನಡೆಸಿದ ಅನುಸಂಧಾನದಿಂದ ಹೊರಹೊಮ್ಮಿದ ಈ ಕೆಳಗಿನ ಸಾಲುಗಳನ್ನು ಓದುತ್ತಿದ್ದ ಹಾಗೆ, ನನ್ನ ಪ್ರಶ್ನೆಗೆ ನಿಮಗೆ ಉತ್ತರ ಹೊಳೆದೇ ಇರುತ್ತದೆ. ಕೊನೆಯಲ್ಲಿ ಅವರ ಫೋಟೋ ಕೂಡಾ ಇದೆ. ಜೊತೆಗೆ ಒಂದು ಕ್ಲೂ ಕೂಡಾ! 
  • ದೇವರು ಇದ್ದಾನೋ ಇಲ್ಲವೋ. ಆದರೆ ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ. ಅಂತಹ ವಿಸ್ಮಯಗಳ ಹುಡುಕಾಟ ಇವರ ಹವ್ಯಾಸ.  
  • ಒಬ್ಬ ಮನುಷ್ಯ ಸಾಮಾಜಿಕವಾಗಿ ಸ್ವಲ್ಪ ಗುರುತಿಸಲ್ಪಟ್ಟರೆ ಸಾಕು. ಅವನನ್ನು ಒಂದು ಫಂಥಕ್ಕೆ ಸೀಮಿತಗೊಳಿಸಿ, ಅವನ ಪ್ರಗತಿಪರವಾದ, ಜೀವಪರವಾದ ನಿಲುವುಗಳನ್ನು ಮೂಲೆಗುಂಪು ಮಾಡುವ ಪ್ರತಿಗಾಮಿತನ ಶಕ್ತಿಮೂಲ ಯಾವುದು?  
  • ಬಹುಸಂಸ್ಕೃತಿಯ, ಧಾರ್ಮಿಕತೆಯ ನಾಡಿನಲ್ಲಿ ಸಹಬಾಳ್ವೆ ಸಾದ್ಯವಿರುವೆಡೆಯಲ್ಲೆಲ್ಲಾ ಅಂತರಂಗದಲ್ಲಿ ಕ್ರೋಧ, ದ್ವೇಷಗಳಂತೆ ಜಾತಿಯತೆಯೂ ಸ್ಥಾಯಿಯಾಗಿ ಇರುವುದರಿಂದ ಸಾಂಸ್ಕೃತಿಕ ಚಿದ್ರೀಕರಣವಾಗುತ್ತಿರುವುದು. 
  • ಒಳಗೊಳಗೇ ಮತ್ತೆ ಗಟ್ಟಿಯಾಗುತ್ತಿರುವ ಜಾತೀಯತೆ. ಜಾಗತೀಕರಣದ ತೀವ್ರತರ ಪ್ರಭಾವ ಮತ್ತು ಪರಿಣಾಮದಿಂದಾಗಿ ಜಾತೀಯತೆಯ ಬೇರುಗಳು ಸಡಿಲವಾಗಬಹುದೆಂಬ ಆಶಾಭಾವನೆ.  
  • ಸನಾತನವಾದಿಗಳ ಪ್ರಕಾರ ಗುರುಪೀಠದ ಹಕ್ಕೇ ಇಲ್ಲದ ಶೂದ್ರಪರಂಪರೆಯ ಮಠಗಳೂ ಸಹ ಬೆಳ್ಳಿಕಿರೀಟ, ಅಡ್ಡಪಲ್ಲಕ್ಕಿ ಉತ್ಸವ ಪಾದಪೂಜೆ ಮೊದಲಾದವುಗಳಲ್ಲಿ ತೊಡಗುತ್ತಿರುವುದು.  
  • ಸ್ವಲ್ಪಮಟ್ಟಿನ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವರಿಗೇ (ನನ್ನನ್ನೂ ಸೇರಿಸಿಕೊಂಡು) ಬೆಕ್ಕು ಅಡ್ಡ ಹೋಗುವುದನ್ನು ನೋಡಿ ’ತಥ್’ ಎನ್ನುವಂತೆ ಆಗುತ್ತದೆ. ಅಂದರೆ ಈ ನಂಬಿಕೆಗಳು ಆನುಷಂಗಿಕವೋ ಎಂಬ ಭಾವ.  
  • ಯಾವುದರ ವಿರುದ್ದ ಶೂದ್ರರು ಸೆಟೆದು ನಿಂತಿದ್ದರೊ ಅದರ ಬಗ್ಗೆಯೇ ಮೃದುವಾದರೆಂದರೆ ಶುದ್ರರೂ ದಲಿತರೂ ಮತ್ತೆ ಸನಾತನಿಗಳ ಊಳಗಕ್ಕಿಳಿಯುವ ಸಾಧ್ಯತೆ.  
  • ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದದ ಪರಿಣಾಮಗಳು.  
  • ಶಿಕ್ಷಣ ಪದ್ಧತಿ, ಮಾಧ್ಯಮ ಮತ್ತು ಗುಣಮಟ್ಟ. ಟೀ.ವಿ. ಚಾನೆಲ್‌ಗಳನ್ನು ಬದಲಾಯಿಸುವಂತೆ, ನಮ್ಮ ನಾಯಕರುಗಳು ಬದಲಾಯಿಸುತ್ತಿರುವ, ದೂರಗಾಮಿತ್ವವಿಲ್ಲದ ಶಿಕ್ಷಣ ನೀತಿ.  
  • ಶಿಕ್ಷಕ ಸಮುದಾಯದ ನಿಷ್ಕ್ರೀಯತೆ. ಪಠ್ಯೇತರ ಜ್ಞಾನದ ಬಗೆಗಿನ ಅನಾದರ. ಸಾಹಿತ್ಯವು ಅಧ್ಯಾಪಕರ ಸೊತ್ತಾಗಿರುವುದು. ಸಾಹಿತಿಗಳೆನಿಸಿಕೊಂಡವರಲ್ಲಿ ಹೆಚ್ಚುತ್ತಿರುವ ಜ್ಞಾನದ ಅಹಂಕಾರ ಮತ್ತು ಜ್ಞಾನ ಮೂಲದ ನಿರಾಕರಣೆ.  
  • ತನ್ನ ಅನುಭವ ಮತ್ತು ಆಲೋಚನೆಗಳನ್ನು ಇತರರಿಗೆ ವರ್ಗಾಯಿಸುವ ಅತ್ಯಂತ ಕ್ಷಿಪ್ರ ಮತ್ತು ಸಮರ್ಥ ಮಾರ್ಗದ ಅನ್ವೇಷಣೆ.  
  • ಕಾಲ, ತಂತ್ರಜ್ಞಾನ ಇವುಗಳ ಬದಲಾವಣೆಯ ವೇಗದೊಂದಿಗೆ ಬದಲಾಗದ ಕನ್ನಡ ಭಾಷೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡವನ್ನು ಬಳಸಲು ಇರುವ ಹಿಂಜರಿಕೆ.  
  • ಪುಸ್ತಕೋದ್ಯಮದ ಶಿಥಿಲ ವ್ಯವಸ್ಥೆ ಹಾಗೂ ಭ್ರಷ್ಟಾಚಾರ. ಸುಳ್ಳು ಹೇಳದೆ, ಮೋಸ ಮಾಡದೆ, ಅನ್ಯಾಯವೆಸಗದೆ ಇಪ್ಪತ್ತನಾಲ್ಕು ಗಂಟೆ ಕಳೆಯುವುದು ಸಹ ಈ ದೇಶದಲ್ಲಿ ದುರ್ಭರವಾದ ಮಹಾಸಾಹಸವಾಗುತ್ತಿರುವುದು.  
  • ಎಲ್ಲಾ ಚಳುವಳಿಗಳು, (ಉದಾಹರಣೆಗೆ ಜಾತಿವಿನಾಶ ಚಳುವಳಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ನವ್ಯ, ದಲಿತ ಮತ್ತು ಬಂಡಯ, ಇತ್ತಿಚಿನ ಪರಿಸರ ಚಳುವಳಿಗಳು) ಕೇವಲ ಸಾಹಿತ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗುತ್ತಿರುವುದು. ಸಾಮಾಜಿಕ ಆಯಾಮವನ್ನು ದಕ್ಕಿಸಿಕೊಳ್ಳದೇ ಇರುವುದು. ಗೋಕಾಕ್ ಮತ್ತು ರೈತ ಚಳುವಳಿಗಳು ಸಾಹಿತ್ಯೇತರ ಚಳುವಳಿಯಾಗಿದ್ದರೂ ಸಾಮಾಜಿಕ ಎಚ್ಚರ ಮೂಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು.  
  • ಆಯಾಯ ಕಾಲಧರ್ಮವನ್ನು ಅನುಸರಿಸಿ ಸಮಾಜೋದ್ಧಾರದಲ್ಲಿ ನಿರತರಾದವರನ್ನು ನೇತಾರರನ್ನು ಅವರುಗಳ ಹೆಸರನ್ನು ಹೇಳಿಕೊಂಡು ತಿರುಗಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಇಂದಿನ ಸಮಸ್ಯೆಗಳೇ ಬೇರೆ ಸ್ವರೂಪದವುಗಳು. ಆದ್ದರಿಂದ ಯಾವುದೇ ನಾಯಕ- ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ಸೇರಿದಂತೆ ಯಾವುದೇ ನಾಯಕರು ಇಂದು ರಿಲವೆಂಟ್ ಆಗಿ ಉಳಿದಿಲ್ಲ.  
  • ವೈಚಾರಿಕತೆ ಎಂಬುದನ್ನು ಕೇವಲ ಧಾರ್ಮಿಕವಾದ, ಕೋಮುವಾದ ಮತ್ತು ಸಾಹಿತ್ಯವಾದದ ಹಿನ್ನೆಲೆಯಲ್ಲಿ ಮಾತ್ರ ಏಕೆ ನೋಡಲಾಗುತ್ತಿದೆ? ವೈಚಾರಿಕತೆಯ ನಿಲುವುಗಳನ್ನು ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿಂದ ಏಕೆ ನೋಡಲಾಗುತ್ತಿಲ್ಲ?  
  • ಮನುಷ್ಯನನ್ನು ಒಟ್ಟು ಪರಿಸರದಿಂದ ಬೇರೆಯಾಗಿಯೇ ನೋಡುತ್ತಿರುವುದರಿಂದ ಆಗುತ್ತಿರುವ ದುರಂತ. 

 
ಕ್ಲೂ : ಅಂದ ಹಾಗೆ ಇಂದು ಅವರ ಹುಟ್ಟು ಹಬ್ಬ. Read More!

ಹಳ್ಳಿಯಾದರೇನು$ ಡಿಲ್ಲಿಯಾದರೇನು$

ಮೂಲ ಪದ್ಯ
ಚಿತ್ರ : ಬೆಂಕಿಯ ಬಲೆ,
ಹಾಡಿದವರು: ಎಸ್‌ಪಿಬೀ.
ಸಂಗೀತ: ರಾಜನ್‌ ಮತ್ತು ನಾಗೇಂದ್ರ,
ಸಾಹಿತ್ಯ : ಉದಯಶಂಕರ್
(ಕ್ಷಮೆಇರಲಿ)
---------------------------------------------------------------

ಟಡಿನ್‌ಟಡಿನಟಾ... ..ಇ.. ಣ.. ನಿ.. ನಾ. .ನ.....ಣ....ಣಿ....ಟಾನಡಿಟನ್‌ಡಿಟ 

ಹಳ್ಳಿಯಾದರೇನು$ ಡಿಲ್ಲಿಯಾದರೇನು$
ಹಳ್ಳಿಯಾದರೇನು$ ಡಿಲ್ಲಿಯಾದರೇನು$
ಜೊತೆಯಾಗಿ ಇಂದೂ$$$ ತ್ರೀಜೀ(3G) ಬರುತ್ತಿಲ್ಲವೇನು$$$
3G ಫೋನ್ ನನ್ನ ಜೀವಾ$$$ ಎಂದಿಗೂ$$
ಹಳ್ಳಿಯಾದರೇನು ಡಿಲ್ಲಿಯಾದರೇನೂ$$$
ಹಳ್ಳಿಯಾದರೇನು$$$$$$$$

ಟಡಿನ್‌ಟಡಿನಟಾ... ..ಇ.. ಣ.. ನಿ.. ನಾ. .ನ.....ಣ....ಣಿ....ಟಾನಡಿಟನ್‌ಡಿಟ

ಈಗಾ ಸಿಗ್ನಲ್‌ ಸಿಗುತ್ತಿಲ್ಲವೇನು$
ನೆಟ್‌ವರ್ಕ್‌ ಪ್ರಾಬ್ಲಮ್ ಇದೆಏನು$
ಈಗಾ$$ ಸಿಗ್ನಲ್‌ ಸಿಗುತ್ತಿಲ್ಲವೇನು$
ನೆಟ್‌ವರ್ಕ್‌ ಪ್ರಾಬ್ಲಮ್ ಇದೆಏನು$
ತ್ರೀಜೀ(3G) ಬಂದ ಮೇಲೆ ಎಲ್ಲಾಕಡೆಗೂ ಸ್ಪೀಡಾ(speed)ದ ಇಂಟರ್ನೆಟ್‌ ಸಿಗದೇ ಇರುವುದೇನೂ?$$$

ಟಡಿನ್‌ಟಡಿನಟಾ... ..ಇ.. ಣ.. ನಿ..

ಟೂಜೀ ಸ್ಕ್ಯಾಮ್‌(scam) ಆಗಿದ್ದರೇನು$
ಸಿಡಬ್ಲೂಜಿ ಸ್ಕ್ಯಾಮ್‌ ಆದರೇನು$
ನಿನ್ನತ್ರ ದುಡ್ಡಿದ್ರೆ, 3Gಪೋನ್‌ ಕೊಂಡು(buy)ಕೊಂಡ್ರೆ
ವಿಡಿಯೋಕಾಲ್‌(videocall) ಮಾಡಬಹುದಲ್ಲವೇನು$$$
3ಜೀ ಇದ್ದರೇ
ಇಂಟರ್ನೆಟ್‌ ಟೀವೀ
ನೋಡಬಹುದಲ್ಲವೇನು!

ನ.....ಣ....ಣಿ....ಟಾನಡಿಟನ್‌ಡಿಟ

ಹಳ್ಳಿಯಾದರೇನು ಡಿಲ್ಲಿಯಾದರೇನೂ$$$$
ಹಳ್ಳಿಯಾದರೇನು$$$

ಟಡಿನ್‌ಟಡಿನಟಾ... ..ಇ.. ಣ.. ನಿ.. ನಾ. .ನ.....ಣ....ಣಿ....ಟಾನಡಿಟನ್‌ಡಿಟ

ಬಿಎಸ್‌ಎನ್‌ಎಲ್‌(BSNL) ಸಿಗದಿದ್ದರೇನು$
ಏರ್‌ಟೆಲ್‌ ಅಥವಾ ವೋಡಾಪೋನ್ ಸಿಗುತ್ತಲ್ಲವೇನು$
ಬಿಎಸ್‌ಎನ್‌ಎಲ್‌(BSNL) ಸಿಗದಿದ್ದರೇನು$
ಏರ್‌ಟೆಲ್‌ ಅಥವಾ  ವೋಡಾಪೋನ್ ಸಿಗುತ್ತಲ್ಲವೇನು$
ಟಚ್‌ಸ್ಕ್ರೀನ್‌ಡಿವೈಸ್‌(Touchscreen Device) ಕೈನಲ್ಲಿದ್ದರೆ ಎಲ್ಲೆಂದರಲ್ಲಿ, ಈಸಿ(Easy)ಯಾಗಿ,
ಇಂಟರ್ನೆಟ್ ಬ್ರೌಸ್(browse) ಮಾಡಬಹುದು
ಬಿಡು ನೀನು ಚಿಂತೆಯನ್ನೂ$$$


ಇ.. ಣ.. ನಿ.. ನಾ. .ನ.....ಣ....ಣಿ....ಉ..ಣ...ನಿ...ಡ..ಟ..ಪ..ಮ.. ಇ.. ಣ.. ನಿ.. ನಾ.

ಯಾರೇನೇ ಅಂದರೇನು, ಯಾವೂರೇ(any village) ಆದರೇನು$
ಗ್ರಾಮೀಣಭಾಗದಲ್ಲೂ ನೆಟ್‌ವರ್ಕ್‌ ಸಿಗುತ್ತೆ ಎಂದು ಭರವಸೆಯ ನೀಡಿಲ್ಲವೇನೂ$$$
ಕೊರಗದೇ$ ಹೆದರದೇ$ 3ಜೀ ಟಚ್‌ಸ್ಕ್ರೀನ್‌ ಫೋನ್‌ ಬಯ್(Buy)ಮಾಡು ನೀನು$$$

ಹಳ್ಳಿಯಾದರೇನು ಡಿಲ್ಲಿಯಾದರೇನು
ಹಳ್ಳಿಯಾದರೇನು ಡಿಲ್ಲಿಯಾದರೇನು$$$$$$$$$$$

-----------------------------------------
ಸಿಡಬ್ಲೂಜಿ = CWG=Common Wealth Games
ಟೂಜೀ  = 2G = 2G Spectrum
ಟಚ್‌ಸ್ಕ್ರೀನ್‌ = Touch screen
ಇಂಟರ್ನೆಟ್‌ ಟೀವೀ  = Internet TV
---------------------------------------






-ಲೋದ್ಯಾಶಿ Read More!

ಇವರು ತಪ್ಪಿಸಿಕೊಂಡವರಂತೆ!

ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು ಹೋಗುತ್ತಿದ್ದರು. ಒಂದೆರಡು ಕಡೆ ಒಂದಿಬ್ಬರು ತಿಪ್ಪೆ ಗುಂಡಿ ಕೆದಕುತ್ತಿದ್ದರು. ಅವರೆಲ್ಲಾ ಭಿಕ್ಷುಕರ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದವರು ಎಂಬ ನಮ್ಮ ಮಾತಿಗೆ ಆಟೋ ಡ್ರೈವರ್ ಹೀಗೆ ಹೇಳಿದ. ‘ಸರ್, ಲೋಕದ ಕಣ್ಣಿಗೆ ಅವರು ಅಲ್ಲಿಂದ ತಪ್ಪಿಸಿಕೊಂಡು ಬಂದವರು. ಆದರೆ ಅವರನ್ನು ಅಲ್ಲಿಯವರೇ ಬಟ್ಟು ಕಳುಹಿಸುತ್ತಿದ್ದಾರೆ, ಅಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಸಾಯುವ ಬದಲು ಬೇರೆಡೆ ಸಾಯಲಿ ಎಂದು ಸರ್ಕಾರವೇ ಅವರನ್ನು ಅನಧಿಕೃತವಾಗಿ ಬಿಡುಗಡೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ’ ಎಂದ. ನಂತರ ಮಾತನಾಡುತ್ತಾ ಅತ ನೀಡಿದ ಕೆಲವು ಮಾಹಿತಿಗಳು ಗಾಬರಿ ಹುಟ್ಟಿಸುವಂತಿದ್ದವು.





ಸರ್ ಅದೊಂದು ನರಕ. ಬೆಳಿಗ್ಗೆಯಿಂದ ಅಲ್ಲಿ ಭಿಕ್ಷುಕರು ಹೊರಬರುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯ ಬಾಗಿಲಿನಲ್ಲಿಯೇ ಅವರು ಬರುತ್ತಿದ್ದಾರೆ. ಅವರೇನು ತಪ್ಪಿಸಿಕೊಂಡು ಹೋಗುವವರು ಹೀಗೆ ರಾಜಾರೋಷವಾಗಿ ಮುಖ್ಯ ಬಾಗಿಲಿನಲ್ಲಿ ಹೋಗುತ್ತಯಾರೆಯೇ? ನಂತರ ಅಲ್ಲಿ ಹೊರಗೆ ಬಂದ ತಕ್ಷಣ ಭಿಕ್ಷೆ ಕೇಳುವುದಕ್ಕೆ ಶುರುವಿಟ್ಟುಕೊಂಡರು. ಅಲ್ಲಿನ ನಮ್ಮ ಆಟೋಸಂಘದವರು, ಸ್ವಲ್ಪ ಹಣ ಸೇರಿಸಿ, ಅಕ್ಕಪಕ್ಕದ ಅಂಗಡಿಗಳವರ ಮನವೊಲಿಸಿ, ಎಲ್ಲರಿಗೂ ಬ್ರೆಡ್ಡು ಬಿಸ್ಕೆಟ್ ಕೊಡಿಸಿದೆವು. ನಂತರ ಕೆಲವರು ಅಲ್ಲಿಯೇ ಮಲಗು ಶುರುಮಾಡಿದರೆ, ಇನ್ನು ಕೆಲವರು ಮೆಜೆಸ್ಟಿಕ್ ಕಡೆ ಹೊರಟರು. ಯಾವುದೇ ಸಿಟಿ ಬಸ್ಸಿನವನೂ ದುಡ್ಡು ಕೊಡುತ್ತೇನೆಂದರೂ ಅವರನ್ನು ಹತ್ತಿಸಿಕೊಳ್ಳಲಿಲ್ಲ. ಆಗ ನಾವು ಒಂದಷ್ಟು ಜನ ಸ್ನೇಹಿತರು, ನಮ್ಮ ನಮ್ಮ ಾಟೋಗಳಲ್ಲಿ ನಾಲ್ಕೈದು ಜನರನ್ನು ಕೂರಿಸಿಕೊಂಡು ಮೆಜೆಸ್ಟಿಕ್ ತಲುಪಿಸಿದೆವು. ಹೀಗೆ ನಾನು ನಾಲ್ಕು ಟ್ರಿಪ್ ಅವರನ್ನು ಉಚಿತವಾಗಿ ಸಾಗಿಸಿ, ಇನ್ನಾದರೂ ಮನೆಗೆ ಹೋಗಬೇಕೆಂದು ಹೋಗುತ್ತಿದ್ದೆ. ಇಂದು ಬೆಳಿಗ್ಗೆಯಿಂದ ನನಗೆ ಐವತ್ತು ರೂಪಾಯಿಕೂಡಾ ಆಗಿರಲಿಲ್ಲ. ಮನೆಯಲ್ಲಿ ಹಬ್ಬ. ಅದಕ್ಕೆ ನೀವು ಯಶವಂತಪುರಕ್ಕೆ ಕರೆದಾಗ ತಡವಾಗಿದ್ದರೂ ನಾನು ಬರಲೊಪ್ಪಿದೆ. ಆದರೂ ಹಬ್ಬದ ದಿನ ನಾವು ಇಷ್ಟು ನಮ್ಮ ಕೈಲಾದ ಸೇವೆಯನ್ನು ಮಾಡಿದೆವೆಂಬ ತೃಪ್ತಿ ನಮಗಿದೆ ಎಂದ.



ಅಷ್ಟರಲ್ಲಿ ಯಶವಂತಪುರದ ಮಾರ್ಗದಲ್ಲಿ ಇನ್ನೂ ಹತ್ತಾರು ಜನ ಭಿಕ್ಷುಕರು ನಡೆದುಕೊಂಡು ಹೋಗುವುದನ್ನು ನಮಗೆ ಆತ ತೋರಿಸಿದ. ನಂತರ ಆತ ಹೇಳಿದ (ಕೆಲವು ಭಿಕ್ಷುಕರು ಅವನಿಗೆ ನೀಡಿದ್ದ ಮಾಹಿತಿಗಳು) ಕೆಲವು ವಿಚಾರಗಳು ಹೀಗಿವೆ.



ಅಲ್ಲಿಯೇ ಆಡಳಿತದವರೇ ಕೆಲವು ಆಯ್ದ ಭಿಕ್ಷುಕರನ್ನು ಬೆಳಿಗ್ಗೆ ಹೊರಕ್ಕೆ ಬಿಡುವುದು. ಸಂಜೆ ಅವರನ್ನು ಎತ್ತಿಕೊಂಡು ಬರುವುದು. ಬೆಳಿಗ್ಗೆಯಿಂದ ಅವರು ಭಿಕ್ಷೆ ಎತ್ತಿ ಸಂಪಾದಿಸಿದ್ದ ಹಣವನ್ನು ಅಲ್ಲಿನ ಜವಾನರು ಆಯಾಗಳು, ಸೆಕ್ಯೂರಿಟಿ ಗಾರ್ಡ್ಸ ಅಧಿಕಾರಿಗಳು ಕಿತ್ತುಕೊಂಡು ಹಂಚಿಕೊಳ್ಳುತ್ತಿದ್ದರಂತೆ.



ಅಲ್ಲಿ ಅಶಕ್ತ ಭಿಕ್ಷುಕರನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಲಾಗಿದೆಯಂತೆ. ಆದರೆ ಅವರೆಷ್ಟು ಕ್ರೂರಿಗಳೆಂದರೆ, ಹತ್ತು ಇಪ್ಪತ್ತು ಜನರನ್ನು ಒಟ್ಟಿಗೆ ಕೂರಿಸಿ ಬಕೆಟ್ಟಿನಿಂದ ನೀರನ್ನು ಎರಚಿ, ಸ್ನಾನವಾಯಿತು ಎಂದು ಕಳುಹಿಸುತ್ತಿದ್ದರಂತೆ. ಸಾವಿರಾರು ಟವೆಲ್ ಪಂಚೆ ಮುಂತಾದವುಗಳನ್ನು ಖರೀದಿಸುತ್ತಿದ್ದರೂ ಒಂದನ್ನೂ ಭಿಕ್ಷುಕರ ಕೈಗೆ ಕೊಡುತ್ತಿರಲಿಲ್ಲವಂತೆ. ಸ್ನಾ ಮಾಡಿಸುವಾಗ ಮಾಡಿಸಿದ ನಂತರ ಬಟ್ಟೆ ಬಸಲಾಯಿಸುವ ಕೆಲಸವೇ ಇಲ್ಲ. ಬೆಟ್ಟೆ ಹಾಕಿಕೊಂಡೇ ಸ್ನಾನ, ಆ ಬಟ್ಟೆಗಳು ಒಣಗುವುದು ಮೈಮೇಲೆಯೇ ಅಂತೆ!.



ಯಾರಾದರೂ ಹೊರಗಿನವರು ಬಂದರೆ, ಅವರೆದುರು ಏನೂ ಮಾತನಾಡದಂತೆ ಹೆದರಿಸುತ್ತಿದ್ದರಂತೆ. ಹೊಡೆಯವುದು ಬಡಿಯುವುದು ಸಾಮಾನ್ಯ ಸಂಗತಿ. ಒಂದು ರೂಮಿನಲ್ಲಿ ಇಪ್ಪತ್ತು ಮೂವತ್ತು ಜನರನ್ನು ಕೂಡಿ ಹಾಕಿ ರಾಥ್ರಿಯೆಲ್ಲಾ ಅಲ್ಲಿಯೇ ಮಲಗಿಸುತ್ತತಿದ್ದರಂತೆ. ಕುಳಿತಲ್ಲಿಯೇ ಒಂದ ಎರಡ ಎಲ್ಲಾ. ಸ್ವಲ್ಪ ಓದು ಬರಹ ಬರುವ, ಪ್ರತಿಭಟನಾ (ಪುನರ್ವಸತಿ ಕೇಂದ್ರದವರ ಮೇಲೆ ರೇಗುವ, ದೈಹಿಕ ಹಲ್ಲೆಗೆ ಮುಂದಾಗುವ) ಮನೋಭಾವದ ಭಿಕ್ಷುಕರೂ ಅಲ್ಲಿದ್ದರಂತೆ. ಅವರನ್ನು ಕಂಡರಂತೂ ಆಯಾಗಳಿಗೂ ಅಧಿಕಾರಿಗಳಿಗೂ ಕೆಂಡಾಮಂಡಲ ಕೋಪ. ಅವರನ್ನಂತೂ ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರಂತೆ.



ಕೊನೆಗೆ ಆಟೋಡ್ರೈವರ್ ಹೇಳಿದ್ದು.



ಸರ್ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಬಹುದಿತ್ತು. ಅವರನ್ನು ಉದ್ಧಾರ ಮಾಡುವುದಾಗಿ ತಂದು ಇಲ್ಲಿ ಕೂಡಿ ಹಾಕುವುದು ಯಾವ ನ್ಯಾಯ. ಈಗ ಅಲ್ಲಿ ಸಾಯುತ್ತಿರುವವ ಸಂಕ್ಯೆ ಹೆಚ್ಚಾಗಿ ಟೀ.ವಿ.ಪೇಪರಿನಲ್ಲಿ ಸುದ್ದಿ ಬರಲು ಶುರುವಾದಾಗ, ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ನಾಟಕ ಆಡುವುದೇಕೆ? ಈಗ ಇವರೆಲ್ಲ ಮತ್ತೆ ಜನಗಳ ಮಧ್ಯೆ ಬಂದು ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲವೇ? ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ ಎಂದ.



ಆಗ ನನ್ನ ಜೊತೆ ಬರುತ್ತಿದ್ದ ನನ್ನ ಸ್ನೇಹಿತರು, ಇನ್ನ ರಸ್ತೆಯಲ್ಲಿ ಅನಾಥ ಹೆಣಗಳು ಸಂಖ್ಯೆ ಹೆಚ್ಚಾಗುತ್ತದೆ. ಸರ್ಕಾರಕ್ಕೆ, ಅವರು ಅಲ್ಲಿ ಸಾಯುವ ಬದಲು ಹೊರಗೆಲ್ಲಾದರೂ ಸತ್ತರೆ ಅಷ್ಟು ಸುದ್ದಿಯಾಗುವುದಿಲ್ಲ ಎಂದೂ ಗೊತ್ತಿದೆ. ಅದಕ್ಕೆ ಈಗ ತಪ್ಪಿಸಿಕೊಂಡು ಹೋದರು ಎಂಬ ಸುದ್ದಿ ಹಬ್ಬಿಸಿ ಬಿಟ್ಟು ಓಡಿಸುತ್ತಿದ್ದಾರೆ ಎಂದರು.


‘ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ’ ಎಂದ ಆಟೋ ಡ್ರೈವರನ ಮಾತುಗಳಲ್ಲಿರುವ ಸತ್ಯವನ್ನು ಕುರಿತು ಯೋಚಿಸುತ್ತಿದ್ದೆ. ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ಓಡಾಡುವ ಮಾತನಾಡುವ ಸಂದರ್ಭ ಬಂದರೆ ಸಾಕ್ಷಿ ನುಡಿಯುವ ಶಕ್ತಿಯಿರುವ ಸಹವಾಸಿ ಮನುಷ್ಯರ ವಿಚಾರದಲ್ಲಿಯೇ ಸರ್ಕಾರಿ ವ್ಯವಸ್ಥೆ ಈ ರೀತಿಯಾಗಿ ನಡೆದುಕೊಂಡಿದೆ. ಇನ್ನು ಮುದಿ ಗೋವುಗಳನ್ನೂ ನಾನೇ ಸಾಕುತ್ತೇನೆ ಎಂದು ಹೊರಟಿರುವ ಈ ವ್ಯವಸ್ಥೆ, ಆ ಮೂಕ ಪ್ರಾಣಿಗಳನ್ನು ಇನ್ನೆಷ್ಟು ಚೆನ್ನಾಗಿ ನೋಡಿಕೊಳ್ಳಬಹುದು. ಈಗ ಸಾವಿರಾರು ಸಂಖ್ಯೆಯ (ಯೂನಿಫಾರ್ಮ್ ಧರಿಸಿರುವ) ಭಿಕ್ಷುಕರು ರಸ್ತೆಯಲ್ಲಿ ಕುಂಟುತ್ತಾ, ಕಾಲೆಳೆಯುತ್ತಾ ಹೋಗುವುದನ್ನು ನೋಡಬೇಕಾಗಿರುವಂತೆ, ಮುಂದೆ ಇನ್ನೇನನ್ನು ನೋಡಬೇಕೋ ತಿಳಿಯುತ್ತಿಲ್ಲ.


ಕೊಸರು: ಬೆಳಿಗ್ಗೆ ವಾರ್ತೆಯಲ್ಲಿ, ಅಲ್ಲಿನ ಅಧಿಕಾರಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿದ, ಹಾಗೂ ಸಚಿವರೊಬ್ಬರನ್ನು ಸಂಬಂಧಪಟ್ಟ ಖಾತೆಯಿಂದ ಕಿತ್ತುಕೊಂಡು, ಬೇರೆ ಖಾತೆಗೆ ನಿಯುಕ್ತಗೊಳಿಸಿದ್ದನ್ನು ಪ್ರಸಾರ ಮಾಡುತ್ತಿದ್ದರು.

ಹಾಗೆ ವಜಾ ಮಾಡುವುದರಿಂದ, ಖಾತೆ ಬದಲಾಯಿಸುವುದರಿಂದ ಆಗಿರುವ ತಪ್ಪು ಸರಿಹೋಗುತ್ತದೆಯೇ? ಮುಖ್ಯಮಂತ್ರಿಗಳೇ ಯೋಚಿಸಬೇಕು Read More!

ಮುಗ್ಗರಿಸಿದ ಮುಂಗಾರು

ಈ ಕೃಷ್ಣಪ್ಪ ಅವರ ನಿರ್ಮಾಣದ ಮೊದಲ ಹಾಗೂ ಯೋಗರಾಜ್‌ ಭಟ್ಟರ ನಿರ್ದೇಶನದ ಮೂರನೇ ಚಿತ್ರ ಮುಂಗಾರುಮಳೆ. ಚಿತ್ರಕ್ಕೆ ಈ ಹೆಸರನ್ನು ಸೂಚಿಸಿದ್ದೇ ಈ ಕೃಷ್ಣಪ್ಪನವರು. ಯಾಕೆ ಈ ಹೆಸರು ಕೊಟ್ಟಿದ್ದು ಎಂಬುದನ್ನೂ ಈ ರೀತಿ ವಿವರಿಸುತ್ತಾರೆ. "ಮುಂಗಾರು ಮಳೆ ಸಾಮನ್ಯವಾಗಿ ನಮ್ಮ ರೈತರಿಗೆ ಯಾವತ್ತೂ ಕೈಕೊಡಲ್ಲ. ಚಿತ್ರದಲ್ಲಿಯೂ ಸಹ ಮಳೆಯ ಸನ್ನಿವೇಶಗಳು ಸಾಕಷ್ಟಿವೆ. ಆದುದರಿಂದ ಈ ಚಿತ್ರಕ್ಕೆ ಮುಂಗಾಳುಮಳೆ ಅಂತಾನೇ ಹೆಸರಿಡೋಣ. ಚಿತ್ರವೂ ಗೆಲ್ಲುತ್ತದೆ ಎಂಬ ಭರವಸೆ ಇದೆ". ಅವರ ಆಶಯದಂತೆ ಚಿತ್ರವು ಗೆದ್ದು ಕನ್ನಡಚಿತ್ರರಂಗದಲ್ಲಿಯೇ ದಾಖಲೆಯನ್ನು ಸೃಷ್ಟಿಸಿದ್ದು ನಮಗೆಲ್ಲಾ ತಿಳಿದೇ ಇದೆ.

ಈ ಕೃಷ್ಣಪ್ಪರವರ ಎರಡನೇ ಚಿತ್ರ ಮೊಗ್ಗಿನಮನಸ್ಸು. ಯುವ ನಿರ್ದೇಶಕ ಶಶಾಂಕ್‌ ನಿರ್ದೇಶನದ ಈ ಚಿತ್ರವೂ ನಿರ್ಮಾಪಕರ ಜೇಬು ತುಂಬಿಸಿತು. ಈ ಎರಡು ಯಶಸ್ವೀ ಚಿತ್ರಗಳ ನಂತರ ಈ ಕೃಷ್ಣಪ್ಪ ಅವರು ಮೂರನೇ ಕೊಡುಗೆ  "ಮತ್ತೆಮುಂಗಾರು". ಚಿತ್ರದ ಹೆಸರು ಕೇಳಿದಾಗ, ಕೃಷ್ಣಪ್ಪನವರು ತಮ್ಮ ಮೊದಲಚಿತ್ರದ ಹೆಸರಿನ ಸೆಂಟಿಮೆಂಟ್‌ನಿಂದ ಪ್ರೇರೇಪಿತರಾಗಿ ಈ ಹೆಸರು ಸೂಚಿಸಿರಬಹುದೇ ಎನ್ನುವ ಅನುಮಾನ ಮೂಡಿತ್ತು.

ಈ ಚಿತ್ರದ ಕಥೆ ಮೊದಲೆರಡು ಚಿತ್ರಗಳ ಹಾಗೇ ಕೇವಲ ಕಥೆಯಲ್ಲ. ಒಬ್ಬ ಭಾರತೀಯ ಅದರಲ್ಲೂ ನಮ್ಮ ಕನ್ನಡಿಗ, ಹೆಸರು ನಾರಾಯಣ ಮಂಡಗದ್ದೆ, ಆಕಾಸ್ಮಾತ್‌ ಆಗಿ ಭಾರತದ ಗಡಿದಾಟಿ ಪಾಕಿಸ್ತಾನವನ್ನು ಸೇರಿಬಿಡುತ್ತಾರೆ. ಆಮೇಲೆ ಅವರು ತಿಳಿಯದೇ ಮಾಡಿದ ತಪ್ಪಿಗೆ 21 ವರ್ಷ ಪಾಕಿಸ್ತಾನದ ಕತ್ತಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಾರೆ. ಅನೇಕ ವರ್ಷಗಳ ನಂತರ ಬಿಡುಗಡೆಯಾಗಿ ಮತ್ತೆ ತಮ್ಮ ತಾಯ್ನಾಡಿಗೆ ಹಿಂದಿರುಗುತ್ತಾರೆ. ಅವರು ಕಳಕೊಂಡಿದ್ದ ಸ್ವತಂತ್ರ ಜೀವನವನ್ನು ಮತ್ತೆ ಕಂಡುಕೊಳ್ಳುತ್ತಾರೆ.

ಇಂತಹ ಒಂದು ಶುಷ್ಕಕಥೆಯನ್ನು ಒಂದು ಚಿತ್ರಕಥೆಯಾಗಿ ಎಣೆದು, ಪರದೆಯ ಮೇಲೆ ತಂದು ಚಿತ್ರವನ್ನು ವೀಕ್ಷಿಸುವ ಪ್ಪ್ರೇಕ್ಷಕನಿಗೆ ಎರಡೂವರೆ ಗಂಟೆ ಎಲ್ಲೂ ಬೋರಾಗದಂತೆ ಒಂದು ಚಿತ್ರವನ್ನು ನಿರ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಕಾರ್ಗಿಲ್‌ ಯುದ್ದವಾದ ಮೇಲೆ ಅದರ ಆಧಾರದ ಮೇಲೆ ಕಥೆಯನ್ನು ಎಣೆದು ನಾಲ್ಕಾರು ಭಾಷೆಗಳಲ್ಲಿ ನಾಲ್ಕಾರು ಚಿತ್ರಗಳು ಬಂದವು. ಹಿಂದಿಯ ಮಿಷನ್ ಕಾಶ್ಮೀರ್, ಕನ್ನಡದ ಸೈನಿಕ ಹೀಗೆ ಪ್ರಯತ್ನಗಳು ನಡೆದಿದ್ದವು. ಅದೇ ರೀತಿ ಹೆಮ್ಮೆಯ ಸ್ವತಂತ್ರ ಹೋರಾಟಗಾರ ಭರತ್‌ಸಿಂಗ್ ಅವರ ಬಗ್ಗೆಯೂ ಕೆಲವು ಚಿತ್ರಗಳು ತೆರೆಕಂಡಿದ್ದವು. ಆದರೆ ಇಂತಹ ನೈಜಘಟನೆಗಳನ್ನ ಆಧರಿಸಿ ಬಂದ ಚಿತ್ರಗಳು ಅಷ್ಟು ಯಶನ್ನುಗಳಿಸದೇ ಹೋದವು.

ಈಗ ತೆರೆಕಂಡಿರುವ ಮತ್ತೆಮುಂಗಾರು ಚಿತ್ರವೂ ನಿರಾಶಾದಾಯಕವಾಗಿ ಸಾಗಿದೆ ಎಂದು ಕೇಳಿದಾಗ ಏಕೋ ಬೇಸರವಾಯಿತು.
ಇಂತಹ ಚಿತ್ರಗಳನ್ನು ನಿರ್ಮಿಸಲು ಚಿತ್ರತಂಡದವರು ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವಂತಹ ಅಂಶಗಳನ್ನೂ ಸಹ ಸಾಕಷ್ಟು ಪ್ರಮಾಣದಲ್ಲಿ ಬೆರೆಸದೇ ಹೋದರೇ, ಚಿತ್ರ ಗೆಲ್ಲುವುದು ಕಷ್ಟಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ "ಟೈಟಾನಿಕ್‌" ಚಿತ್ರ. ಎಷ್ಟು ಶುಷ್ಕಕಥೆಯದು?  ಆದರೆ ಚಿತ್ರವನ್ನು ನೋಡುವಾಗ ಎಲ್ಲಿಯೂ ಬೋರ್ ಹೊಡೆಸದಂತೆ, ಮಸಾಲೆ ಅಂಶಗಳನ್ನೂ ಸೇರಿಸಿಕೊಂಡಿದ್ದರಿಂದ ಚಿತ್ರ ದಾಖಲೆಯ ಪ್ರಮಾಣದಲ್ಲಿ ಯಶಸ್ಸುಗಳಿಸಿತ್ತು. ಇಂತಹ ಉದಾಹರಣೆಗಳನ್ನು ಗಮನದಲ್ಲಿಟ್ಟು ಕೊಂಡಾದರೂ ನಮ್ಮ ಕನ್ನಡ ನಿರ್ದೇಶಕರು ಮುಂದಿನ ಬಾರಿ ಮತ್ತೊಂದು ಪ್ರಯತ್ನವನ್ನು ಮಾಡಿ ಯಶನ್ನು ಗಳಿಸಲಿ ಎಂದು ಆಶಿಸೋಣ.

ನಂಬಿದರೆ ನಂಬಿ ಬಿಟ್ಟರೇ ಬಿಡಿ. 
1. ನಾರಾಯಣ ಮಂಡಗದ್ದೆಯವರು ಎಷ್ಟು ವರ್ಷಗಳು ಪಾಕಿಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು?
ಮೊನ್ನೆ ಚಿತ್ರದ ಬಿಡುಗಡೆಯ ದಿನ, ಸ್ವತಃ ನಾರಾಯಣರವರೇ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತಾಡ್ತಾ ಇದ್ದರು. ಆಗ ಇವರು 21 ವರ್ಷ ಜೈಲಿನಲ್ಲಿದ್ದೆ ಎಂದು ಹೇಳಿದ್ದನ್ನು ಕೇಳಿದ ನೆನಪಿತ್ತು. ಆದರೂ ನಿನ್ನೆಯ ವಿ.ಕ ಲವಲವಿಕೆಯಲ್ಲಿ ಬಂದಿದ್ದ ಲೇಖನವನ್ನೊಮ್ಮೆ ಓದಿ ಮಾಹಿತಿಯನ್ನು ಗಟ್ಟಿಮಾಡಿಕೊಳ್ಳೋಣದೆಂದು ನೋಡಿದಾಗ ಆಶ್ಚರ್ಯೊಂದು ಕಾದಿತ್ತು.
ಮಹೇಶ್ ದೇವಶೆಟ್ಟಿ ಹಾಗೂ ಎ. ಆರ್, ರಘುರಾಮ್ ಎಂದು ಇಬ್ಬರು ಪ್ರತ್ಯೇಕವಾಗಿ ಇದೇ ವಿಷಯವಾಗಿ ಒಂದೇ ಪುಟದಲ್ಲಿ ಅದೂ ಅಕ್ಕಪಕ್ಕದಲ್ಲಿ ಪ್ರಕಟಿಸಿರುವ ಈ ಲೇಖನದ ಚಿತ್ರವನ್ನು ಗಮನಿಸಿ.


ಗಮನಿಸಿದಿರಾ? ಒಬ್ಬರು 15 ವರ್ಷ ಜೈಲು ಶಿಕ್ಷೆ ಮತ್ತೊಬ್ಬರು 21 ವರ್ಷ ಜೈಲು ಶಿಕ್ಷೆ ಅಂತ ಬರ್ದಿದ್ದಾರೆ. ಎಡಗಡೆಯ ಮಾಹಿತಿ ಮಹೇಶ್ ದೇವಶೆಟ್ಟಿಯವರದು, ಎಡಗಡೆಯದು ಎ,ಆರ್,ರಘುರಾಮ್‌ಅವರದು...ಪೂರ್ತಿ ಲೇಖನವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ. ಈಗ ಇದರಲ್ಲಿ ಯಾವುದು ಸರಿ, ನೀವೇ ಹೇಳಿ.

2. ಇನ್ನೂ ಒಂದು ವಿಷಯವಿದೆ. ನೇರಪ್ರಸಾರ ಕಾರ್ಯಕ್ರಮದಲ್ಲಿ ಸ್ವತಃ ನಾರಾಯಣ ಮಂಡಗದ್ದೆಯವರು ಮಾತಾಡುತ್ತಿರುವಾಗ, ತಾವನುಭವಿಸಿದ ಕಹಿ ಘಟನೆಗಳ ಬಗ್ಗೆ ವಿವರಿಸಿದರು. ಕಡೆಗೆ ಕಾರ್ಯಕ್ರಮದ ಸಂದರ್ಶಕರು ನೀವು ಚಿತ್ರದ ನಾಯಕ ನಟ ಕಿಟ್ಟಿಯವರನ್ನು ನೇರವಾಗಿ ಭೇಟಿಯಾಗಿದ್ದೀರ? ಎಂದು ಪ್ರಶ್ನಿಸಿದರು. ಆಗ ನಾರಾಯಣ್‌ ಅವರು, ಇಲ್ಲ ಇನ್ನೂ ನೇರವಾಗಿ ಭೇಟಿಯಾಗಿಲ್ಲ. ಆದರೆ ಇವತ್ತು ಚಿತ್ರದ ಮೊದಲ ಪ್ರದರ್ಶನವನ್ನು ವೀಕ್ಷಿಸಲು ಅವರೂ ಬರುತ್ತಿದ್ದಾರೆ. ಆಗ ಅವರನ್ನೂ ಭೇಟಿಯಾಗುತ್ತಿದ್ದೇನೆ. ಎಂದು ಉತ್ತರಿಸಿದ್ದರು. ಆದರೆ ಇದೇ ಮೇಲಿನ ಎ.ಆರ್, ರಘುರಾಮ್‌ರವರು ಲಕಲಕದ ಅಲ್ಲಲ್ಲ ಲವಲವಿಕೆಯ ಆರನೇ ಪುಟದಲ್ಲಿ ಏನೆಂದು ಬರೆದಿದ್ದಾರೆ ಎಂದು ಕೆಳಗಿನ ಚಿತ್ರದಲ್ಲಿ ನೀವೇ ವೀಕ್ಷಿಸಿ.
ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ. ಇದಕ್ಕೇನೇಳ್ತೀರಿ? ಕೇವಲ 10 ದಿನಗಳ ಹಿಂದೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಸ್ವತಃ ನಾರಾಯಣ್‌ ಅವರೇ ತಿಳಿಸಿದ್ದರು, ನಾನಿನ್ನೂ ಕಿಟ್ಟಿಯವರನ್ನು ಭೇಟಿಯಾಗಿಲ್ಲ ಎಂದು, ಆದರೆ ಇಲ್ಲಿ ನೋಡಿದರೆ, ಒಂದು ವರ್ಷದ ಭಾರೀ ಆತ್ಮೀಯತೆ ಅಂತೆಲ್ಲಾ ಬರ್ದಿದ್ದಾರೆ. ಯಾವ್ದ್ ಸರಿ, ಯಾವ್ದ್ ತಪ್ಪು?

ನಿಮ್ಮ ಅನಿಸಿಕೆಯನ್ನು ಕಾಮೆಂಟ್‌ ಮೂಲಕ ತಿಳಿಸಬಹುದು.

ಮೇಲಿನ ಈ ಎರಡು ಗೊಂದಲಗಳನ್ನು ಪಕ್ಕಕ್ಕಿಡೋಣ. ಇಂತಹ ವಿಭಿನ್ನ ಪ್ರಯತ್ನದ ಚಿತ್ರಗಳಿಗೆ ನಾವು ಪ್ರೋತ್ಸಾಹಿಸಬೇಕಾಗಿದೆ. ಈಗಲೂ ಸಮಯಮೀರಿಲ್ಲ, ಹೋಗಿ, ಚಿತ್ರವನ್ನು ವೀಕ್ಷಿಸಿಬನ್ನಿ, ಚಿತ್ರತಂಡಕ್ಕೆ ಪ್ರೋತ್ಸಾಹಿಸಿ. Read More!

ಹಾಲಿವುಡ್ To ಬಳ್ಳಾರಿದುಡ್

"ಪೋಗೋ ಕನ್ನಡ ಡಬ್ಬಿಂಗು ಹೋಗೋ" ಪೋಸ್ಟ್ ನ ಮುಂದುವರಿದ ಭಾಗ.

ಡಬ್ಬಿಂಗ್‌ಗೆ ಕನ್ನಡದಲ್ಲಿ ಅವಕಾಶ ಕೊಡುವುದಕ್ಕೆ ಅನಿವಾರ್ಯತೆ ಎದುರಾಗಿದೆ. ಈ ಅನಿವಾರ್ಯತೆಗೆ ಪ್ರಮುಖ ಕಾರಣಗಳೇನಿರಬಹುದು ಎಂದು ಅವಲೋಕಿಸಿದಾಗ ನಮಗೆ ಎದುರಾದ ಕೆಲವು ಆಂಶಗಳು ಈ ರೀತಿ ಇವೆ.

1. ಮನರಂಜನೆಯ ಬಹುದೊಡ್ಡ ಸೋರ್ಸ್ ಎಂದರೆ ಚಿತ್ರರಂಗ ಹಾಗೂ ಕಿರುತೆರೆ.
2. ಈ ಮಾದ್ಯಮಗಳ ಕಾರ್ಯಕ್ರಮಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ.
3. ಆದರೆ ಆ ನಿಟ್ಟಿನಲ್ಲಿ ಈಗ ನಾವು ಹಿಂದೆ ಬಿದ್ದಿದ್ದೇವೆ.
3. ಇಂದು ಹಳ್ಳಿ ಹಳ್ಳಿಗಳಲ್ಲಿ  ತೆಲುಗು, ತಮಿಳು, ಹಿಂದಿ, ಆಂಗ್ಲ ಚಿತ್ರಗಳು ಜನಪ್ರಿಯತೆ ಗಳಿಸುತ್ತಿವೆ.
4. ಕನ್ನಡದ ಕಂಪು ಹರಡ ಬೇಕಿದ್ದ ಕಡೆಗಳಲ್ಲಿ ಇಂದು ಅನ್ಯಭಾಷೆಗಳು ಆವರಿಸಿಕೊಳ್ಳುತ್ತಿವೆ. 
5. ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಕನ್ನಡ ಒಂದು ಸೀಮಿತಭಾಷೆಯಾಗಲಿದ್ದು ಬರಬರುತ್ತಾ ಅವನತಿ ಮಾರ್ಗಹಿಡಿಯುತ್ತಿದೆ.
6. ಅನ್ನಕೊಡುವ ಭಾಷೆಯಾಗದ ಹೊರತು ಕನ್ನಡಕ್ಕೆ ಉಳಿಗಾಲವಿಲ್ಲ.
7. ಮಕ್ಕಳಲ್ಲಿ ಮಾತೃ ಭಾಷೆಯ ಮೇಲಿನ ಪ್ರೀತಿ, ಗೌರವ, ಉತ್ಸಾಹವನ್ನು ಉಳಿಸಿ ಅದು ನಮ್ಮ ಮುಂದೆ ಪೀಳಿಗೆಗೆ ಪ್ರಸಾರವಾಗುವಂತೆ ನಾವು ಕ್ರಮಗಳನ್ನು ರೂಪಿಸಬೇಕಿದೆ.
8. ಹಳ್ಳಿಹಳ್ಳಿಗಳಲ್ಲಿರುವ ಪ್ರತಿ ಕನ್ನಡಿಗರಿಗೆ ಮನರಂಜನೆ, ವಿಜ್ಞಾನ ತಂತ್ರಜ್ಞಾನವನ್ನು ತಮ್ಮ ಮಾತೃಭಾಷೆಯಲ್ಲಿಯೇ ತಲುಪಿಸಬೇಕು.
9. ಕನ್ನಡಭಾಷೆಯಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ನಿರೂಪಿಸಿ ತೋರಿಸಬೇಕು.
10. ಇದೆಲ್ಲಕ್ಕೆ ಈಗ ಬಹುಮುಖ್ಯವಾಗಿ ಕೂಡಲೇ ತೆಗೆದುಕೊಳ್ಳಬೇಕಾಗಿರುವ ಕ್ರಮವೆಂದರೆ, ಅನ್ಯಭಾಷೆಯಲ್ಲಿ ಪ್ರಸಾರವಾಗುವ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳನ್ನು ಹಾಗೂ ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ಕನ್ನಡಕ್ಕೆ ಡಬ್‌ಮಾಡಲು ಅವಕಾಶ ನೀಡಬೇಕು.

ಹೌದು, ಕನ್ನಡ ಭಾಷೆಯ ವ್ಯಾಪ್ತಿಯ ಪರದಿಯನ್ನು ನಾವು ಹಿಗ್ಗಿಸಬೇಕಿದೆ. ಕಾಲಕ್ಕೆ ತಕ್ಕಂತೆ, ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ನಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೇ ಡಾರ್ವಿನ್‌ನ ವಿಕಾಸವಾದದ ಸಿದ್ದಾಂತದಂತೆ ಬಲಿಷ್ಟ ಹಾಗೂ ದುರ್ಬಲರ ಮಧ್ಯೆ ಸಂಘರ್ಷವಾಗಿ ಕಡೆಗೆ ದುರ್ಬಲವಾದದು ಕಾಲದ ವೇಗಕ್ಕೆ ಪ್ರತಿಸ್ಪರ್ದಿಸಲಾಗದೆ ಇತಿಹಾಸವನ್ನು ಸೇರಬೇಕಾಗುತ್ತದೆ.

1. ಸುಮಾರು ಹದಿನೈದು ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿತ್ತು ಎಂದು ಮೆಲುಕು ಹಾಕೋಣ.
ಹಳ್ಳಿಗಳಲ್ಲಿ ಜನರು ಒಂದು ಟೆಲಿಪೋನ್‌ ಕನೆಕ್ಷನ್‌ ಬೇಕೆಂದು ಆಸೆಪಟ್ಟರೆ ಆಗ ಅದಕ್ಕೊಂದು ಅಪ್ಲಿಕೇಶನ್ ಭರ್ತಿ ಮಾಡಿ ಕೊಡಬೇಕಿತ್ತು. ಅಪ್ಲಿಕೇಶನ್ ಭರ್ತಿಮಾಡಿ ಮುಂಗಡವಾಗಿ ಹಣಪಾವತಿಸಿ ಅದನ್ನು ಸೂಕ್ತ ಅಧಿಕಾರಿಯ ಕೈಗೆ ಸಲ್ಲಿಸಿದ ನಂತರ, ಅದು ಕಛೇರಿಯ ಅನೇಕ ಟೇಬಲ್‌ಗಳನ್ನು ಹತ್ತಿ ಇಳಿಯ ಬೇಕಿತ್ತು. ಈ ಹತ್ತಿ ಇಳಿಯುವ ಹಾವು ಏಣಿ ಆಟದಲ್ಲಿ ಅನೇಕ ಬಾರಿ ಅಪ್ಲಿಕೇಶನ್ ಕಳೆದೇ ಹೋಗಿರುತ್ತಿತ್ತು. ಅಧಿಕಾರಿಗಳು ಒಂದು ಭಾರ ತಪ್ಪಿತು ಎಂಬಂತೆ ಅದನ್ನು ಮರೆತು ಆಯಾಗಿರುತ್ತಿದ್ದರು. ಆಮೇಲೆ ಮೂರ್ನಾಲ್ಕು ತಿಂಗಳು ಕಾದು ಕಾದೂ ...ಏನೂ ಬೆಳವಣಿಗೆ ಕಂಡುಬರದ ಕಾರಣ ಆ ಹಳ್ಳಿಯಿಂದ ಬಂದ ವ್ಯಕ್ತಿ ತನ್ನ ಅಪ್ಲಿಕೇಶನ್ ಈಗ ಏನಾಗಿದೆ ಎಂದು ಪ್ರಶ್ನಿಸಿದನೆಂದರೆ ಆಗ ಅಧಿಕಾರಿಗಳು ನಾಲ್ಕು ನಿಮಿಷ ತಲೆಕೆಡಿಸಿಕೊಂಡು, ಕಡೆಗೆ ಸ್ವಾಮೀ, ಇನ್ನೊಂದು ಅಪ್ಲಿಕೇಶನ್ ಭರ್ತಿಮಾಡಿಕೊಡಿ, ನೀವು ಸಲ್ಲಿಸಿದ್ದ ಅಪ್ಲಿಕೇಶನ್ ಎಲ್ಲೋ ಕಳೆದುಹೋಗಿದೆ ಎಂದು ಏನೂ ತಿಳಿಯದವರಂತೆ ಹಾರಿಕೆಯ ಉತ್ತರಕೊಟ್ಟು ಪಾರಾಗುತ್ತಿದ್ದರು. ಏನೂ ಪ್ರಶ್ನಿಸದೇ ಆ ಹಳ್ಳಿಗರು ಮತ್ತೊಮ್ಮೆ ಅಪ್ಲಿಕೇಶನ್ ಕೊಟ್ಟುಬರಬೇಕಿತ್ತು.

ಈ ಪ್ರಕ್ರಿಯೆ  ಕನಿಷ್ಟ ಪಕ್ಷ ನಾಕ್ಕು ತಿಂಗಳಿಂದ ಒಂದು ವರ್ಷವಾದರೂ ಸಮಯ ತೆಗೆದುಕೊಂಡು ಕಡೆಗೊಮ್ಮೆ ಎಲ್ಲವೂ ಕೈಗೂಡಿ ಹಳ್ಳಿಗರ ಮನೆಗೆ ಟೆಲಿಪೋನ್‌ ಬರುತ್ತದೆ ಎಂದು ಇಟ್ಟುಕೊಳ್ಳಿ. ಈಗ ಮತ್ತೊಂದು ಸಮಸ್ಯೆ. ಅದೆಂದರೆ ಸ್ವಲ್ಪ ಹೆಚ್ಚುಗಾಳಿ ಬೀಸಿದರೆ ಸಾಕು ರಸ್ತೆಬದಿಯ ಯಾವುದೋ ಮರದ ಕೊಂಬೆ ಮುರಿದು ಟೆಲಿಪೋನ್‌ ತಂತಿಯ ಮೇಲೆ ಬಿದ್ದು ಎಲ್ಲವೂ ಅಸ್ತವ್ಯಸ್ತವಾಗುತ್ತದೆ. ಆಗ ಆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಟೆಲಿಪೋನ್‌ಗಳೆಲ್ಲವೂ ಸತ್ತುಬೀಳುತ್ತವೆ. ನಂತರ ಅನೇಕ ಬಾರಿ ಟೆಲಿಪೋನ್ ಎಕ್ಸ್‌ಚೇಂಜ್ ಆಫೀಸ್‌ಗೆ ಓಡಾಡಿದ ಬಳಿಕ ಒಂದು ತಿಂಗಳೊಳಗಾಗಿ ಸರಿ ಪಡಿಸುತ್ತೇವೆ ಎನ್ನುವ ಭರವಸೆ ಸಿಕ್ಕುತ್ತದೆ. ಅದಾದ ಎರಡು ತಿಂಗಳಲ್ಲಿ ಮತ್ತೆ ಪೋನ್‌ ಚಲಾವಣೆಯಲ್ಲಿ  ಬರುತ್ತದೆ. ಅಷ್ಟರಲ್ಲಿ ಮತ್ತೆ ಗಾಳಿ ಮಳೆ ಏನಾದರೂ ತೊಂದರೆ ಕೊಟ್ಟರೆ ಮತ್ತದೆ ಸತ್ತು ಬಿದ್ದ ಪೋನ್‌, ಸರಿ ಪಡಿಸುತ್ತಿದ್ದೇವೆ ಎನ್ನುವ ಅಧಿಕಾರಿಯ ಭರವಸೆಯ ಮೇಲೆಯೇ ಜನ ಕಾಯುತ್ತಿರಬೇಕಿತ್ತು.

ಇನ್ನು ರೇಡಿಯೋ ಬೇಕೆನಿಸಿದರೆ ತಟ್ಟನೇ ತರಬಹುದಿತ್ತು. ಆದರೆ ಅದರಲ್ಲಿ ಮಾತೃಭಾಷೆಯಲ್ಲಿ ಬರುವ ಕಾರ್ಯಕ್ರಮಗಳು ಸೀಮಿತವಾಗಿದ್ದವು .

ಇನ್ನು ಟೆಲಿವಿಷನ್ ಬಗ್ಗೆ ಹೇಳಬೇಂಕೆಂದರೆ, ಸರ್ಕಾರದ ಡಿಡಿ1 ಬಿಟ್ಟರೆ ಬೇರೆ ಚಾನಲ್‌ ಇರುತ್ತಿರಲಿಲ್ಲ. ಅಂದಿನ ಕಾಲದಲ್ಲಿ ನಮ್ಮ ಹಳ್ಳಿಗರಿಗೆ ಬಾಹ್ಯಪ್ರಪಂಚದ ಆಗುಹೋಗುಗಳ ಬಗ್ಗೆ ಒಂದು ಭರವಸೆಯ ಮಾದ್ಯಮವೊಂದಿದ್ದರೆ ಅದು ಕೇವಲ ದಿನಪತ್ರಿಕೆಗಳು ಮಾತ್ರ ಆಗಿದ್ದವು.

ಇದೆಲ್ಲಾ ಯಾಕೆ ಹೇಳಬೇಕಾಗಿದೆ ಎಂದರೆ ಅಂದಿನಕಾಲದಲ್ಲಿ ಹಳ್ಳಿಜನರ ಬಗ್ಗೆ ಎಷ್ಟು ನಿರ್ಲಕ್ಷೆವಿತ್ತು ಎಂಬುದನ್ನು ನಾವು ಮನಗಾಣಬೇಕಾಗಿದೆ. ಅವರು ಕೂಲಿಕೆಲಸಕ್ಕೆ ಹಾಗೂ ಕೃಷಿಗೆ ಬಿಟ್ಟು ಬೇರೇ ಯಾವುದಕ್ಕೂ ನಾಲಾಯಕ್ಕು ಎನ್ನುವಂತೆ ಅಲಿಖಿತ ಶಾಸನಗಳು ಜಾರಿಯಲ್ಲಿದ್ದವು.
ಹಳ್ಳಿಜನಕ್ಕೆ ವಿದ್ಯುತ್‌ ಇಲ್ಲದಿದ್ದರೇನೆಂತೆ?
ಟೀವಿ, ರೇಡಿಯೋ ಇಲ್ಲದಿದ್ದರೇನಂತೆ?
ಟೆಲಿಪೋನ್‌ ಯಾವ ಕೆಲಸಕ್ಕೆ?
ಹೊಲದಲ್ಲಿ ದುಡಿಯುವ ಅವಿಧ್ಯಾವಂತರಾದ ಅವರಿಗೆ ಇಷ್ಟೆಲ್ಲಾ ಸವಲತ್ತುಗಳ ಅವಶ್ಯಕತೆ ಏನಿದೆ?
ಈ ಸವಲತ್ತುಗಳನ್ನು ಪಡೆದು ಅವರು ಏನನ್ನು ಸಾಧಿಸಬೇಕಾಗಿದೆ??
ಎನ್ನುವಂತಹ ಪರಿಸ್ತಿತಿ ದಟ್ಟವಾಗಿತ್ತು. ಆಗಿನ ಹಳ್ಳಿಜನಗಳ ಮನೋಭಾವನೆಯೂ ಈ ನಿರ್ಲಕ್ಷೆಕ್ಕೆ ತಕ್ಕಂತೆಯೇ ಇದ್ದಿತು. ನಮ್ಮದೇನಿದ್ದರೂ ಇಷ್ಟೇ! ನಾವು ಪಡೆದುಕೊಂಡು ಬಂದದ್ದು ಇಷ್ಟೇ!
ಪಾಲಿಗೆ ಬಂದದ್ದನ್ನು ಅನುಭವಿಸಬೇಕು ಎಂಬಂತೆ, ಯಾವ ಮನರಂಜನೆಗೂ ಒತ್ತುನೀಡದೇ, ತಾವಾಯಿತು ತಮ್ಮ ಹೊಲದ ಕೆಲಸಗಳಾದವು ಎಂಬಂತೆ ಈ ಎಲ್ಲಾ ಸವಲತ್ತುಗಳಿಂದ ದೂರವಾಗತೊಡಗಿದರು.


2. ಈಗ ಪರಿಸ್ತಿತಿ ಏನಾಗಿದೆ???
ಈಗ ಟೆಲಿಪೋನ್‌ ಅಪ್ಲಿಕೇಶನ್ ಕೊಟ್ಟು ಬಂದು ತಿಂಗಳುಗಟ್ಟಲೇ ಕಾಯುವುದು ಅಥವಾ ಗಾಳಿ ಮಳೆಗೆ ಟೆಲಿಪೋನ್‌ ತಂತಿ ಕಟ್ಟಾಗಬಹುದು, ಪೋನ್ ಸಾಯಬಹುದು ಎಂಬ ಆತಂಕವೂ ಇಲ್ಲ. ಕೈಯಲ್ಲಿ ಸಾವಿರ ರೂಪಾಯಿ ಇದ್ದರೆ ಅರ್ಧಗಂಟೆಯಲ್ಲಿ ಕಾರ್ಯನಿರತ ಮೋಬೈಲ್ ಪೋನ್‌ ನಿನ್ನ ಕೈಸೇರುತ್ತದೆ. ಅದಕ್ಕೆ ಇನ್ನೋಂದಿಷ್ಟು ಜಾಸ್ತಿ ಹಣ ವ್ಯಯಿಸಿದರೆ ಮತ್ತಷ್ಟು ಅನುಕೂಲಕರ ಮೋಬೈಲ್ ಫೋನ್ ತೆಗೆದುಕೊಂಡು ಅದರಲ್ಲಿಯೇ ಹಾಡು ಕೇಳಬಹುದು, ವೀಡಿಯೋ ನೋಡಬಹುದು ಅಥವ ಆಟಗಳನ್ನು ಆಡಬಹುದು.

ಈಗ ಏಎಮ್ ರೇಡಿಯೋ ಅಲ್ಲದೇ, ಎಪ್‌ಎಮ್‌ ರೇಡಿಯೋಗಳು ಸಾಕಷ್ಟು ತಲೆಎತ್ತಿವೆ. ಎಂಟತ್ತು ಕನ್ನಡ ಎಪ್ಎಮ್‌ ಚಾನೆಲ್‌ಗಳಿವೆ. ಆದರೇ ಇವಿನ್ನೂ ಸಣ್ಣಪುಟ್ಟ ನಗರಗಳನ್ನು ಹಾಗೂ ಹಳ್ಳಿಗಳನ್ನು ತಲುಪಿಲ್ಲ.

ಈಗ ಟೆಲಿವಿಷನ್‌ನಲ್ಲಿ  ಏನಾಗಿದೆ. ಕೆಲವೇ ವರ್ಷಗಳ ಹಿಂದೆ ಕೇವಲ ಮೇಲ್ವರ್ಗದ ಆಸ್ತಿ ಎಂಬಂತಿದ್ದ ಟೆಲಿವಿಷನ್ ಇಂದು ಮನೆಮನೆಗು ತಲುಪುತ್ತಿದೆ.ಅಲ್ಲದೇ ಕೇವಲ ಡಿಡಿ1, ಚಂದನ, ಉದಯ, ಉಷೆ ಎಂದು ಎರಡು ಅಥವಾ ಮೂರು ಚಾನೆಲ್ ಮಾತ್ರ ಪ್ರಸಾರವಾಗುತ್ತಿದ್ದ ಕಾಲ ಈಗ ಮಾಯವಾಗಿದೆ. ಈ ಟೀವೀ, ಟೀವೀ9, ಝೀಟೀವೀ, ಕನ್ನಡ ಕಸ್ತೂರಿ, ಸುವರ್ಣ ಹಾಗೂ ತೀರ ಇತ್ತೀಚಿನ ಸಮಯ ಹೀಗೇ ಹತ್ತಾರು ಕನ್ನಡ ಟೀವೀ ಚಾನೆಲ್‌ಗಳು ಈಗ ಪ್ರಸಾರವಾಗುತ್ತಿವೆ. ಸದ್ಯಕ್ಕೆ  ಅಡ್ವರ್ಟೈಸ್ ಪ್ರಕಟಿಸುವವರಿಗೇ ಸಮಸ್ಯೆ ಎದುರಾಗಿದೆ. ಜನ ಯಾವ ಚಾನೆಲ್ನಲ್ಲಿ ಅಡ್ವರ್ಟೈಸ್ ಬರುತ್ತೋ ಆಗ ತಕ್ಷಣ ಮತ್ತೊಂದು ಚಾನೆಲ್‌ಗೆ ಸ್ವಿಚ್ ಮಾಡುತ್ತಾರೆ. ಕೇವಲ ಎರಡು ನಿಮಿಷದ ಬಿಡುವಿಗೂ ಸಹ ನಮ್ಮ ವೀಕ್ಷಕರು ಸಿದ್ದರಿಲ್ಲ.

ಈಗ ಡಿಟಿಎಚ್ ಮೂಲಕ ನೇರಉಪಪಗ್ರಹ ಸಂಪರ್ಕ ಸಾದ್ಯವಾಗಿರುವುದರಿಂದ ಮತ್ತಷ್ಟು ಹೆಚ್ಚಿನ ಚಾನೆಲ್‌ಗಳೂ ಲಭ್ಯ. ಅದೂ ಉತ್ತಮ ಕ್ಷಾಲಿಟಿಯದ್ದು. ಇಷ್ಟಲ್ಲದೇ ಇಂಟರ್ನೆಟ್ ಇನ್ನೂ ಏನೇನು ಕ್ರಾಂತಿ ಮಾಡಲಿದೆಯೋ? ತಿಳಿಯದು.

ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಕ್ರಾಂತಿಗಳಾದ ಮೇಲೆ ನಮ್ಮ ಜನಜೀವನವೂ ಬದಲಾವಣೆಯಾಗದೇ ಉಳಿದಿರಲು ಹೇಗೆ ಸಾದ್ಯ? ನೀವೇ ಹೇಳಿ. ಮನರಂಜನೆಗೆ ಇಷ್ಟೆಲ್ಲಾ ಅವಕಾಶಗಳಿರುವಾಗ, ದುಡಿಮೆಯ ಕಡೆಗೆ ತಲೆಕೆಡಿಸಿಕೊಳ್ಳುವವರೂ ಕಡಿಮೆಯಾದರು..

ಮೊದಲೆಲ್ಲಾ ಅಂದಾಜು ಬೆಳಗ್ಗೆ 9 ರಿಂದ ಸಂಜೆ 5.30 ರ ತನಕ ಯಾವ ಬಿಡುವಿಲ್ಲದೆ ಮೈಬಗ್ಗಿಸಿ ದುಡಿಯುತ್ತಿದ್ದ ದಿನಗೂಲಿಗಳು ಇಂದು ತುಂಬಾ ಸ್ಮಾರ್ಟ್ ಆಗಿರುವವರಂತೆ ವರ್ತಿಸುತ್ತಾರೆ. ಬೆಳಗ್ಗೆ 9.30 ರಿಂದ ಮದ್ಯಾಹ್ನ 1 ಗಂಟೆ ಅಷ್ಟೇ ಅವರ ಕೆಲಸದ ವೇಳೆ. ಅಲ್ಲಿಗೆ ಆ ದಿನದ ಕೆಲಸ ಮುಗಿಯಿತು. ಇದು ಪ್ರತೀದಿನ ಅಲ್ಲ. ವಾರಕ್ಕೆ ಮೂರು ದಿನ ಮಾತ್ರ ಕೆಲಸ. ಉಳಿದ ದಿನಗಳಲ್ಲಿ ಇಷ್ಟೂ ಕೆಲಸ ಮಾಡುವುದಿಲ್ಲ.

2.1 ಮತ್ತೆ ಏನ್ಮಾಡ್ತಾರೆ?
ಮನರಂಜನೆ. ಉದಾಹರಣೆಗೆ ಟೀವೀ ನೋಡುವುದು, ಇಸ್ಪೀಟ್ ಆಡುವುದು, ಪಿಕ್ಚರ್ ನೋಡುವುದು. ಕಡೆಗೆ ಏನಿಲ್ಲವೆಂದರೆ ಗುಂಪುಕಟ್ಟಿಕೊಂಡು ಸಮಯದೂಡುತ್ತಾರೆ. ಅದೂ ದಿನಾ ತಡರಾತ್ರಿಯವರೆಗೆ. .

ಇಷ್ಟೆಲ್ಲದರ ನಡುವೆ ಇಂಟರ್ನೆಟ್ ಮಾಡಿರುವ ಕ್ರಾಂತಿ ಹೇಳತೀರದು. ಒಬ್ಬ ಕೂಲಿ ಕಾರ್ಮಿಕನೂ ಸಹ ಅಂತರ್ಜಾಲದ ಮೂಲಕ ಮುಂಬೈ ಶೇರುಮಾರುಕಟ್ಟೆಯ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಉತ್ಸಕನಾಗುತ್ತಾನೆಂದರೆ ನೀವೂ ನಂಬಲೇ ಬೇಕು.

ಈ ಅನುಕೂಲಗಳ ಮದ್ಯೆ ಮತ್ತೊಂದು ಅನುಕೂಲವೇನೆಂದರೆ ಈ ಬಡಜನರಿಗೆ ಈಗ ಬಿಪಿಓ ಕಾರ್ಡ್, ಯಶಸ್ವಿಸಿ ಕಾರ್ಡ್‌ ಮುಂತಾದ ಸರ್ಕಾರೀ ಸವಲತ್ತುಗಳು ಸಿಗುವುದರಿಂದ ಆಸ್ಪತ್ರೆಯ ಖರ್ಚೂ ಇಲ್ಲ, ಪಡಿತರ ಚೀಟಿ ಇರುವುದರಿಂದ ದಿನಬಳಕೆಯ ಅನೇಕ ವಸ್ತುಗಳು ತೀರಾ ಕಡಿಮೆಬೆಲೆಗೆ ಲಭ್ಯ. ಅಲ್ಲದೇ ದಿನಗೂಲಿಯೂ ಹೆಚ್ಚಾಗಿದೆ.

3 ತಾತ್ಪರ್ಯವೇನೆಂದರೆ, 
ವಿಜ್ಞಾನ ಹಾಗೂ ತಂತ್ರಜ್ಞಾನದ ದೂರಸಂಪರ್ಕ ವಿಭಾಗದ ಈ ಕ್ರಾಂತಿಗಳು, ಮನುಷ್ಯನ ಜೀವನಶೈಲಿಗೆ ಹಿಂದೆಂದಿಗಿಂತಲೂ ಅಧಿಕ ವೇಗವನ್ನು ಒದಗಿಸಿವೆ. ಅಂತರ್ಜಾಲದಲ್ಲಿ ಮಾಹಿತಿಯು ಕ್ಷಣಮಾತ್ರದಲ್ಲಿ ಪ್ರಪಂಚದ ಮೂಲೆಮೂಲೆಯನ್ನು ತಲುಪುತ್ತದೆ.  ಅಂತರ್ಜಾಲದ ಸೋಷಿಯಲ್‌ ನೆಟ್‌ವರ್ಕ್‌ಗಳ ಮೂಲಕ ಇಂದಿನ ಯುವಪೀಳಿಗೆ ತನ್ನ ಬಾಳಸಂಗಾತಿಯನ್ನು ಆಯ್ಕೆಮಾಡಿಕೊಳ್ಳಬಲ್ಲಂತಹ ಉದಾಹರಣೆಗಳು ನಮ್ಮ ಮುಂದಿವೆ. ದಶಕಗಳ ಹಿಂದೆ ಬೇರ್ಪಟ್ಟಿದ್ದ ತಂದೆ-ಮಕ್ಕಳು ಪೇಸ್ಬುಕ್‌ ಮೂಲಕ ಮತ್ತೆ ಒಂದಾದ ಉದಾಹರಣೆಗಳು ಸಿಗುತ್ತವೆ.  

ಈಗ ನಮ್ಮ ಹಳ್ಳಿಜನರು ಸಹ ಬದಲಾಗುತ್ತಿದ್ದಾರೆ. ಅವರು ಈ ಹಿಂದಿನಂತಿಲ್ಲ. ಮನರಂಜನೆಗೆ ಹೆಚ್ಚಿನ ಮಹತ್ವ ನೀಡಲಾರಂಬಿಸಿದ್ದಾರೆ. ಆದುದರಿಂದ ಅವರಿಗೆ ನಮ್ಮ ಮಾತೃ ಭಾಷೆಯ ಟೀವೀ ಕಾರ್ಯಕ್ರಮಗಳು,  ಚಲನಚಿತ್ರಗಳು ಸಾಲದಾಗಿದೆ. ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಎಲ್ಲವೂ ಬೇಕಿದೆ. ಇಲ್ಲಿ ಮಾತೃ ಭಾಷೆ ಅವರಿಗೆ ಮತ್ತೊಂದು ನೆಪ ಮಾತ್ರ. ಅವರಿಗೆ ಮನರಂಜನೆಯೇ ಮುಖ್ಯ. ಅದು ಯಾವ ಭಾಷೆಯಾದರೇನಂತೆ. ಅದು ಅವರೀಗೂ ಬೇಕಿಲ್ಲ. ಬಿಡುವಿಲ್ಲದೇ ಟೀವೀ ವೀಕ್ಷಿಸುವವರಿಗೆ ತಮಿಳು, ತೆಲುಗು ಹಿಂದಿ, ಇಂಗ್ಲೀಷ್ ಅರ್ಥಮಾಡಿಕೊಳ್ಳುವುದೂ ಅಸಾದ್ಯವೇನಲ್ಲ ಬಿಡಿ.

ಈಗ ಅವರಿಗೆ ಮುಖ್ಯವಾಗಿ ಬೇಕಿರುವುದು ಮಾತೃ ಭಾಷೆಯ ಕಾರ್ಯಕ್ರಮಗಳಲ್ಲ. ನಿರಂತರವಾಗಿ ಮನರಂಜನೆ ಒದಗಿಸಬಲ್ಲ ಹೆಚ್ಚೆಚ್ಚು ಟೀವೀ ಚಾನೆಲ್ಗಳು. ಹಾಗಾಗಿಯೇ ಜನ ಇಂಗ್ಲೀಷ್‌ನ ಅವತಾರ್ , ಅನಕೊಂಡ, ಜುರಾಸಿಕ್ಪಾರ್ಕ್, ಇತ್ಯಾದಿ ಚಿತ್ರಗಳನ್ನೂ ವೀಕ್ಷಿಸುತ್ತಾರೆ. ಅಷ್ಟೇ ಅಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳನ್ನೂ ವೀಕ್ಷಿಸುತ್ತಾರೆ. ಇನ್ನೂ ಪೋಗೋ, ಕಾರ್ಟೂನ್‌ , ನ್ಯಾಶನಲ್ ಜಿಯೋ ಮುಂತಾದ ಚಾನಲ್‌ಗಳು ಸಿಕ್ಕರೆ ಅವನ್ನೂ ಅಲ್ಪ ಸ್ವಲ್ಪ ವೀಕ್ಷಿಸಿಯಾರು. 


ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಮಾತೃಭಾಷೆಗೆ ಕೇವಲ ಕಳೆದ ಒಂದು ಶತಮಾನದ ಆರಂಬದಿಂದೀಚೆಗೆ ಬೆಳಕಿಗೆ ಬಂದಿರುವ ಟೀವೀ ಹಾಗೂ ಚಲನಚಿತ್ರಗಳಿಗೆ ಡಬ್ಬಿಂಗ್‌ ಅವಕಾಶ ನೀಡಲಿಲ್ಲ ಎಂದ ಮಾತ್ರಕ್ಕೆ, ನಮ್ಮ ಭಾಷೆ ನಾಶವಾಗಲಿದೆ ಎನ್ನುವಂತೆ ಆತಂಕ ವ್ಯಕ್ತಪಡಿಸುವವರು ಸ್ವಲ್ಪ ಧೈರ್ಯದಿಂದ ವರ್ತಿಸಬೇಕಾಗಿದೆ. ಭಾಷೆ ಅಷ್ಟು ಕ್ಷುಲ್ಲಕವೂ ಅಲ್ಲ, ಕ್ಷಣಿಕವೂ ಅಲ್ಲ.

ಇಂದು ಅಂತರ್ಜಾಲದಲ್ಲಿಯೂ ಭಾಷೆ ಬೆಳೆಯುತ್ತಿದೆ. ಮುಂದೆ ಅಂತರ್ಜಾಲವು ತನ್ನ ಪರದಿಯನ್ನು ಮತ್ತಷ್ಟು ವಿಸ್ತರಿಸುವುದು ಅಕ್ಷರಶಹ ನಿಜ. ಆಗ ಕನ್ನಡವೂ ಮತ್ತಷ್ಟು ಹೆಚ್ಚೆಚ್ಚು ಬೆಳಕಿಗೆ ಬರುವುದೂ ಸತ್ಯ. ಇಷ್ಟಲ್ಲದೇ ಸಾಕಷ್ಟು ಸಾಹಿತಿಗಳು ನಮ್ಮೆದುರಿಗೆ ಇದ್ದಾರೆ. ಅಪಾರ ಜ್ಞಾನಸಂಪತ್ತು ನಮ್ಮ ಭಾಷೆಯಲ್ಲಿದೆ. ತಂತ್ರಜ್ಞಾನ ಬೆಳೆದಂತೆ ಭಾಷೆಗಳಿಗೂ ಸಾಕಷ್ಟು ಅನುಕೂಲಗಳು ಬರಲಿವೆ.

ಇರಲಿ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಎಂದರೆ ಇಂದು ಎದ್ದಿರುವ ಡಬ್ಬಿಂಗ್‌ ವಿವಾದಕ್ಕೆ ಇವೆಲ್ಲವೂ ಪಾಲುದಾರರು.

ಏನೇ ಆಗಲಿ ನಮ್ಮ ಮಾತೃ ಭಾಷೆ ಅನ್ನಕೊಡುವ ಭಾಷೆಆಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೌದು. ಆಗಾಗಬೇಕಾಗಿದೆ.

ನಮ್ಮ ಕೆಲವು ಸ್ನೇಹಿತರು ವಿವರಿಸುವಂತೆ ತಮಿಳು, ತೆಲುಗು ಮುಂತಾದ ರಾಜ್ಯಗಳಲ್ಲಿ ಅಥವಾ ಚೀನಾ, ಜಪಾನ್‌ ಇತ್ಯಾದಿ ದೇಶಗಳಲ್ಲಿ ಜನರು ಎಲ್ಲಾ ಕಾರ್ಯಕ್ರಮಗಳನ್ನೂ ಅವರದೇ ಮಾತೃಭಾಷೆಯಲ್ಲಿ ವೀಕ್ಷಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಏಕೆ ಸಾದ್ಯವಿಲ್ಲ? ಕನ್ನಡಕ್ಕೂ ಡಬ್ಬಿಂಗ್ ಬರಲಿ ಎಂದು ಮೊರೆಹೋಗಿದ್ದಾರೆ. ಇವರ ಕಾಳಜಿಯನ್ನು ನಾವು ಸ್ವಾಗತಿಸಲೇಬೇಕು. ಆದರೆ ಡಬ್ಬಿಂಗ್‌ಗೆ ಅವಕಾಶ ನೀಡದಿದ್ದರೆ, ನಮ್ಮ ಮಾತೃಭಾಷೆಯ ಅಸ್ಥಿತ್ವಕ್ಕೆ ದಕ್ಕೆಯುಂಟಾಗುತ್ತದೆ ಎಂದರೆ ಅದನ್ನು ಸ್ವೀಕರಿಸಲು ಸಾದ್ಯವಿಲ್ಲ. ಸ್ನೇಹಿತರೇ ನೀವೇ ಉತ್ತರಿಸಿ,

"ಅನ್ಯ ಭಾಷೆಯವರು ಪೋಗೋ, ಕಾರ್ಟೂನ್‌ ನೆಟ್‌ವರ್ಕ, ಡಿಸ್ಕವರಿ...ಇತ್ಯಾದಿ ಟೀವೀ ಕಾರ್ಯಕ್ರಮಗಳನ್ನ ಅಥವಾ ಅವತಾರ್, ಜು.ಪಾರ್ಕ್‌ನಂತಹ ಚಲನಚಿತ್ರಗಳನ್ನು ಬಾಲ್ಯದಲ್ಲಿ ತಮ್ಮ ಮಾತೃ ಭಾಷೆಯಲ್ಲಿಯೇ ವೀಕ್ಷಿಸಿದ್ದಾರೆ ಎಂಬುದನ್ನೇ ಮಾನದಂಡವಾಗಿಟ್ಟುಕೊಂಡು ಅವರಿಗೆ ಯಾರಾದರೂ  ಯಾವುದಾದರೂ ಉದ್ದೆಯನ್ನು ನೀಡಲು ಮುಂದೆ ಬಂದಿದ್ದಾರೆಯೇ? ಅಥವಾ ಬರುತ್ತಿದ್ದಾರೆಯೇ?. ಅಥವಾ ಅಂತಹವರಿಗೇನಾದರೂ ವಿದ್ಯಾಬ್ಯಾಸದಲ್ಲಿ, ಉದ್ಯೋಗದಲ್ಲಿ ರಿಸರ್ವೇಶನ್‌  ಸಿಕ್ಕುತ್ತದೆಯೇ ? ಅಥವಾ ಆದಾಯ ತೆರಿಗೆಯಲ್ಲಿ ಡಿಸ್ಕೌಂಟ್‌  ಇದೆಯಾ?"

ಮತ್ತೊಮ್ಮೆ ನಮ್ಮ ಸ್ನೇಹಿತರು ಹೀಗೆ ವಿವರಿಸುತ್ತಾರೆ. ಈ ಮೇಲಿನ ಕೆಲವು ಚಿತ್ರಗಳನ್ನು ಡಬ್‌ ಮಾಡಿಯೇ ಅನ್ಯ ಭಾಷಿಕರೂ ಸಾಕಷ್ಟು ಹಣ ಗಳಿಸಿದ್ದಾರೆ ಎಂದು. ಆದುದರಿಂದ ಆರ್ಥಿಕವಾಗಿಯೂ ಕೂಡ ಡಬ್ಬಿಂಗ್‌ನಿಂದ ಲಾಭಗಳಿಸಬಹುದು ಎನ್ನುತ್ತಾರೆ.
ಲಾಭಗಳಿಸಕ್ಕೆ ಹಾಲಿವುಡ್ಡಿನ ಚಿತ್ರಗಳನ್ನು ಡಬ್‌ ಮಾಡಲು ಅವಕಾಶ ಕೊಡುವುದೇನೋ ಸೂಕ್ತವೇ. ಮತ್ತಷ್ಟು ಸಂಸಾರಗಳ ಜೀವನಾಂಶಕ್ಕೆ ಇದು ಆದಾಯಮೂಲವಾಗಬಹುದು. ಅಲ್ಲದೇ ಇದಕ್ಕೆ ಬೇಕಾದ ತಂತ್ರಜ್ಞರಿಗೂ ಕೆಲಸ ಒದಗಿಸದಂತಾಗುಹುದು. ಆಗ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು ಎನ್ನುವ ಉದ್ದೇಶವೂ ಕೈಗೂಡುತ್ತದೆ. ಹೌದು. ತುಂಬಾ ಒಳ್ಳೆಯ ಆಲೋಚನೆ. ಇದೊಂದು ಉತ್ತಮ ಅವಕಾಶವೇ ಸರಿ.

ಆದರೆ ನನ್ನದೊಂದು ಸಣ್ಣ ಅನುಮಾನ,  ಈ ರೀತಿ ಮುಂದೆ ಅನುಕೂಲವಾಗಬಹುದು ಎಂದು ಡಬ್ಬಿಂಗ್‌ಗೆ ಅವಕಾಶಬೇಕು ಎಂದು ಒತ್ತಾಯಿಸುವರು, ಇದಾಗಲೇ ಸಾಕಷ್ಟು ಸಂಸಾರಗಳಿಗೆ ಅನ್ನ ನೀಡುತ್ತಿರುವ ಬಳ್ಳಾರಿ ಗಣಿಗಾರಿಕೆಯನ್ನು ಏಕೆ ಬೆಂಬಲಿಸಬಾರದು? ಅಥವಾ ಮುಂದೆ ಬೆಂಬಲಿಸುವರೇ? ನೋಡೀ . ಅಲ್ಲೂ ಸಹ ಬಹಳ ಜನಕ್ಕೆ ಅನ್ನ ಸಿಕ್ತಿದೆ. ಅವರಲ್ಲಿ ಕನ್ನಡಿಗರೂ ಇದ್ದಾರೆ. ಅವರ ಜೀವನಾದಾರಕ್ಕೆ ಮಾರ್ಗವಾಗಿದೆ ಈ ಗಣಿಗಾರಿಕೆ . ಈಗ ಇದ್ದಕ್ಕಿದ್ದಂತೆ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಡಬರುತ್ತಿರುವ ಇದೇ ಸಂದರ್ಭದಲ್ಲಿ ಡಬ್ಬಿಂಗ್‌ ಪರವಾದಿಸುವವರು ಗಣಿಗಾರಿಕೆಗೆ ಏಕೆ ಸಪೋರ್ಟ್ ಮಾಡಬಾರದು? ಏಕೆ ಇನ್ನೂ ಸುಮ್ಮನಿದ್ದಾರೆ? ಈಗ ಅಲ್ಲಿ ಬೀದಿಗೆ ಬರಲಿರುವ ಸಂಸಾರಗಳ ಬಗ್ಗೆ ಇವರ ಅಭಿಪ್ರಾಯವೇನು? .

ನಮ್ಮ ಚಿತ್ರರಂಗ ಅಥವಾ ಟೀವೀ ಮಾದ್ಯಮದವರು ವಿದೇಶದ ಉತ್ಪನ್ನಗಳನ್ನ ಬಳಸಿಕೊಂಡು ಲಾಭಗಳಿಸಬಹುದಾದರೆ. ಇದೇ ನಮ್ಮ ಕರ್ನಾಟಕದಿಂದ ಕಚ್ಚಾವಸ್ತುವೊಂದನ್ನ ವಿದೇಶಕ್ಕೆ ರಫ್ತು ಮಾಡಲು ಸಂಪೂರ್ಣ ಸ್ವಾತಂತ್ರ ಇರಬೇಕಿತ್ತಲ್ಲವೇ? ಮತ್ಯಾಕೆ ಇಷ್ಟೆಲ್ಲಾ ವಿರೋದವಿದೆ. ನಾಳೇ ಡಬ್ಬಿಂಗ್‌ ನಿಷೇದಿಸಿ ಎಂದು ನೀವೇ ಪಾದಯಾತ್ರೆ ಹೊರಡಲ್ಲ ಅಂತ ನಿಮಗೆ ಖಾತ್ರಿ ಇದೆಯಾ?

ಈ ಹಿಂದಿನ ಪೋಸ್ಟ್‌ಗೆ ಒಬ್ಬ ಓದುಗರು ಈ ರೀತಿ ಪ್ರಶ್ನಿಸಿದ್ದರು, "ಹಾಲಿವುಡ್‌ನ ಹೀಮ್ಯಾನ್, ಸೂಪಾರ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌ ಇಂತಹ ಚಿತ್ರಗಳನ್ನು ವೀಕ್ಷಿಸಿ, ನಮ್ಮ ಮಕ್ಕಳು ಅದೇ ರೀತಿ ಹೀರೋಗಳಾಗಬೇಕೆಂದು ಬಯಸುತ್ತಾರೆ. ಆದರೆ ಈಗ ಅಂತಹ ಚಿತ್ರಗಳು ಕನ್ನಡದಲ್ಲಿ ಲಭ್ಯವಿಲ್ಲ, ಇದರಿಂದ ನಮ್ಮ ಮಕ್ಕಳು ವಂಚಿತರಾಗುತ್ತಿದ್ದಾರೆ. ನಾವೇನು ಮಾಡಬೇಕು?"
ಮಾನ್ಯರೇ ನಿಮ್ಮ ಮಕ್ಕಳು ಅಂತಹ ಹೀರೋಗಳಾದರೆ ನಮಗೂ ಸಂತೋಷವೇ. ಆದರೆ ಒಂದು ಮಾತು ತಿಳಿಸಲಿಚ್ಚಿಸುತ್ತೇನೆ. ಅಂತಹ ಸ್ಟಂಟ್‌ಗಳನ್ನು ಚಿತ್ರೀಕರಿಸುವ ಮುನ್ನ ಅವರು ಸಾಕಷ್ಟು ಪೂರ್ವಸಿದ್ದತೆಗಳನ್ನು ಮಾಡಿಕೊಂಡಿರುತ್ತಾರೆ, ಅಲ್ಲದೇ ಅದಕ್ಕೆಂದೇ ಇರುವ ವಿಶೇಷ ಸಾಹಸಿಗರ ತಂಡದಿಂದ ಟ್ರೈನಿಂಗ್‌ ತೆಗೆದುಕೊಂಡಿರುತ್ತಾರೆ. ಈ ಎಲ್ಲಾ ಸಿದ್ದತೆಗಳ ನಂತರವೂ ಅನೇಕ ಬಾರಿ ನಟರು ಪ್ರಾಣಾಂತಿಕ ಅಪಾಯಗಳನ್ನುಎದುರಿಸಿದ್ದಿದೆ. ಆದುದರಿಂದ ನಿಮ್ಮ ಮಕ್ಕಳಿಗೆ ಇಂತಹ ಚಿತ್ರಗಳನ್ನು ತೋರಿಸುವ ಮುನ್ನ ಅವರಿಗೆ ಮನವರಿಕೆ ಮಾಡಿಕೊಡಬೇಕಾದದ್ದು ನಿಮ್ಮ ಕರ್ತವ್ಯ. ನೀವೇ ಅವರಿಗೆ ಹುರಿದುಂಬಿಸುವವರಂತೆ ಕಾಣುತ್ತಿದೆ. ಸ್ವಲ್ಪ ಹುಷಾರು. ಮುಂಜಾಗೃತಕ್ರಮಗಳ ಕಡೆಗೂ ಹೆಚ್ಚರವಹಿಸಿ.

ಸಾರಾಂಶವೇನೆಂದರೆ,
1. ಡಬ್ಬಿಂಗ್‌ಗೆ ಅವಕಾಶಕೊಟ್ಟರೆ ನಮ್ಮ ಸಂಸ್ಕೃತಿಗೆ ದಕ್ಕೆ ಬರುತ್ತೆ ಹಾಗೂ
2. ಡಬ್ಬಿಂಗ್‌ ಇಲ್ಲವಾದರೆ ನಮ್ಮ ಭಾಷೆ ಅವನತಿಯಾಗುತ್ತದೆ
ಮೇಲಿನ ಎರಡೂ ಹೇಳಿಕೆಗಳು ಸಹ ಅವಾಸ್ತವ.
 
ಕಡೆಯದಾಗಿ ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಕನ್ನಡಕ್ಕೆ ಡಬ್ಬಿಂಗ್‌ ಪರವಾಗಿ ಅಥವಾ ವಿರೋದವಾಗಿ ವಾದಮಾಡಲಿಕ್ಕೆಂದು ಈ ಲೇಖನವನ್ನು ಪ್ರಕಟಿಸಿದ್ದಲ್ಲ. ಇದು ಕೇವಲ ಒಂದು ವಿಶ್ಲೇಷಣೆ. ಆದರೂ ಈ ಲೇಖನವೂ ಓದುಗರ ಕಾಮೆಂಟ್‌ಗಳನ್ನು ಸ್ವಾಗತಿಸುತ್ತದೆ.

ಚಿತ್ರಗಳು ಅಂತರ್ಜಾಲ ಕೃಪೆ. Read More!

ಪೋಗೋ ಕನ್ನಡ ಡಬ್ಬಿಂಗು ಹೋಗೋ

ಕನ್ನಡಕ್ಕೆ ಡಬ್ಬಿಂಗು ಬರಲಿ ಎನ್ನುವುದು ಅಂತರ್ಜಾಲದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಅಲ್ಲಿ ಇಲ್ಲಿ ಚರ್ಚೆಗಳು ನಡೆಯುತ್ತಿವೆ. ಗ್ರಾಹಕರಲ್ಲಿ ಅನೇಕರು ಡಬ್ಬಿಂಗ್ ಪರವಾಗಿದ್ದಾರೆ. ಆದರೆ ಚಿತ್ರರಂಗದಲ್ಲೆ ಅನೇಕ ತಂತ್ರಜ್ಞರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ, ಆಗುತ್ತಿದೆ.

ಈ ಕೆಳಗಿನ ಪ್ಯಾರಾದಲ್ಲಿ ಡಬ್ಬಿಂಗ್‌ ಹಾಗೂ ರೀಮೇಕ್‌ ಚಿತ್ರಗಳಿಗಿರುವ ವ್ಯತ್ಯಾಸವನ್ನು ವಿವರಿಸಲಾಗಿದೆ. ಆದುದರಿಂದ ಇದು ಈಗಾಗಲೇ ನಿಮಗೆ ತಿಳಿದಿದ್ದರೆ ಈ ಪ್ಯಾರಾವನ್ನೂ ಹಾರಿಸಿ, ಮುಂದಿನ ಪ್ಯಾರಾದಿಂದ ಮುಂದುವರಿಸಿ.
ಮೊದಲಿಗೆ ಡಬ್ಬಿಂಗ್ ಎಂದರೇ...ಅನ್ಯಭಾಷೆಯ ಒಂದು ದೃಶ್ಯಾವಳಿಗೆ ತಮ್ಮದೇ ಭಾಷೆಯನ್ನು ಅಳವಡಿಸುವುದು. ಆದರೆ ಮೂಲ ದೃಶ್ಯದ ಕಥೆಯಾಗಲಿ ಅಥವಾ ಪಾತ್ರಗಳಾಗಲಿ ಯಾವುದೂ ಬದಲಾಗುವುದಿಲ್ಲ.  ಉದಾಹರಣೆಗೆ ಒಂದು ಆಂಗ್ಲ ಭಾಷೆಯ ಚಿತ್ರದ ಪಾತ್ರಗಳು ಸಂಪೂರ್ಣ ಕನ್ನಡದಲ್ಲಿಯೇ ಮಾತಾಡುತ್ತಿರುವಂತೆ ಕೇವಲ ಧ್ವನಿಯನ್ನು ಅಳವಡಿಸಲಾಗುತ್ತದೆ. ಮೂಲ ಕಥೆಗೆ ತಕ್ಕಂತೆ ಸಂಭಾಷಣೆಯನ್ನೂ ಸಹ ನಮ್ಮ ಭಾಷೆಗೆ ಅನುವಾಧಿಸಲಾಗಿರುತ್ತದೆ. ರೀಮೇಕ್‌ ಹಾಗೂ ಡಬ್ಬಿಂಗ್‌ ನಡುವೆ ಇರುವ ವ್ಯತ್ಯಾಸ ಎಂದರೆ ರೀಮೇಕ್‌ ಚಿತ್ರದಲ್ಲಿ ಸಂಪೂರ್ಣ ಚಿತ್ರವನ್ನು ಮರುಸೃಷ್ಟಿಸಲಾಗುತ್ತದೆ. ಕೇವಲ ಕಥೆ (ಕೆಲವೊಮ್ಮೆ ಸಂಗೀತ ಹಾಗೂ ಸಾಹಿತ್ಯ)ಮಾತ್ರ ಮೂಲಚಿತ್ರದಿಂದ ಪಡೆದುಕೊಂಡು ನಂತರ, ಪಾತ್ರಗಳು, ಸಂಭಾಷಣೆ, ಚಿತ್ರೀಕರಣದ ಸ್ಥಳ, ಭಾಷೆ, ಹೀಗೇ ಎಲ್ಲವನ್ನೂ ಹೊಸದಾಗಿ ಆಯಾ ನೇಟಿವಿಟಿಗೆ ತಕ್ಕಂತೆ ಮರು ನಿರ್ಮಿಸಬೇಕಾಗುತ್ತದೆ ಅಥವಾ ಶೂಟಿಸಬೇಕಾಗುತ್ತದೆ.  ಆದರೆ ಡಬ್ಬಿಂಗ್‌ನಲ್ಲಿ ಇಷ್ಟೆಲ್ಲಾ ರಗಳೆ ಇಲ್ಲ. ಕೇವಲ ಸಂಭಾಷಣೆಯನ್ನು ಅನುವಾಧಿಸಿ ಅದನ್ನು ಮೂಲ ಚಿತ್ರಕ್ಕೆ ಅಳವಡಿಸಿದರೆ ಆಯಿತು.

ಈಗ ಕೆಲವು ಕನ್ನಡಪರ ಆಸಕ್ತಿಯುಳ್ಳವರು ಕನ್ನಡ ಡಬ್ಬಿಂಗ್‌ ಬೇಕೇ ಬೇಕು ಎಂದು ಒತ್ತಾಸೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಇವರು ಮುಂದಿಡುತ್ತಿರುವ ಕೆಲವು ಮುಖ್ಯ ಕಾರಣಗಳು ಈ ರೀತಿ ಬರುತ್ತವೆ.

<<
1. ಬೆಂಗಳೂರಿನ ಇಂಗ್ಲಿಷ್ ಮೀಡಿಯಂ ವಾತಾವರಣದಲ್ಲಿ ಬೆಳೆಯೋ ಮಕ್ಕಳಿಗೆ ಪೊಗೊ, ಕಾರ್ಟೂನ್ ನೆಟವರ್ಕ್, ಡಿಸ್ನಿ ಚಾನಲ್ ನಲ್ಲಿ ಬರುವ ಕಾರ್ಟೂನ್ ಕಾರ್ಯಕ್ರಮವನ್ನು ಇಂಗ್ಲಿಷ್ ಅಲ್ಲಿ ನೋಡಿ ಆನಂದಿಸಬಹುದು. ಆದರೆ ಅದೇ, ಕರ್ನಾಟಕದ ಚಿಕ್ಕ ಚಿಕ್ಕ ಊರಲ್ಲಿರುವ ಕನ್ನಡದ ಕಂದಮ್ಮಗಳು ಮಾತ್ರ ಅರ್ಥ ಆಗದೇ ಇದ್ರೂ ಇಂಗ್ಲಿಷ್, ಹಿಂದಿಯಲ್ಲೇ ನೋಡಬೇಕು.
.
.
.
.
2.೯೦೦ ಕೋಟಿಯ ಅವತಾರ್ ಸಿನೆಮಾ ಕನ್ನಡದಲ್ಲಿ ಮಾಡಲು ಎಂದಿಗಾದರೂ ಸಾಧ್ಯವೇ? ಹಾಗಿದ್ದಾಗ ಅದನ್ನು ನೋಡಬೇಕು ಅನ್ನುವ ಕನ್ನಡಿಗರು ಪರ ಭಾಷೆಯಲ್ಲೇ ನೋಡುತ್ತಾರೆ. ಅಲ್ಲಿಗೆ ಕನ್ನಡ ಎಲ್ಲೂ ಸಲ್ಲದ ನುಡಿಯಾಗಿ ಉಳಿಯುತ್ತಿದೆ. ನಮಗೆ ನಮ್ಮ ಉದ್ಯಮವೂ ಬೇಕು, ನಮ್ಮ ಭಾಷೆಯೂ ಬೇಕು.
.
.
.

3.ನನ್ನ ಮಕ್ಕಳು ಕನ್ನಡದಲ್ಲಿ ಕಾರ್ಟೂನ್ ಕಾರ್ಯಕ್ರಮಗಳು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಾರ್ಟೂನ್ ನೆಟ್ವರ್ಕ್,ಡಿಸ್ಕವರಿ ವಾಹಿನಿಗಳಲ್ಲಿ ನೋಡಬಯಸಿದರೆ, ಅದು ಕನ್ನಡದಲ್ಲಿಲದ ಕಾರಣ ಇಂಗ್ಲಿಷ್ ನಲ್ಲಿಯೇ ನೋಡಬೇಕಿರುವ ಅನಿವಾರ್ಯತೆ ಇವತ್ತಿನ ಮಟ್ಟಿಗೆ ಇದೆ.
>>

ಈಗ ಈ ಹೇಳಿಕೆಗಳನ್ನು ಸ್ವಲ್ಪ ವಿಮರ್ಶಿಸೊಣ.
ಇಂದು ನಮ್ಮ ಕರ್ನಾಟಕದಲ್ಲಿ ಆಂಗ್ಲಭಾಷೆಯ ಬೆಳವಣಿಗೆ ಎಷ್ಟು ವೇಗದಲ್ಲಿದೆ ಎಂದರೆ ಮೇಲೆ ತಿಳಿಸಿರುವ ಪೋಗೋ, ಕಾರ್ಟೂನ್‌ ನೆಟ್‌ವರ್ಕ್‌ ಚಾನೆಲ್‌ಗಳು ಅಥವಾ ಅವತಾರ್, ಜುರಾಸಿಕ್‌ ಪಾರ್ಕ್‌ ನಂತಹ ಚಲನಚಿತ್ರಗಳು ನಮ್ಮ ಗ್ರಾಮೀಣ ಪ್ರದೇಶದ ಚಿಕ್ಕ ಚಿಕ್ಕ ಊರುಗಳಲ್ಲಿರುವ ಮಕ್ಕಳನ್ನು ತಲುಪಲು ಇನ್ನೂ ಕೆಲವು ವರ್‍ಷಗಳು ಬೇಕಾಗಬಹುದು. ಆದರೆ ಈಗಾಗಲೇ ಎಲ್ಲಾಕಡೆ ಆಂಗ್ಲಮಾದ್ಯಮದ ಶಾಲೆಗಳು ತಲೆಯೆತ್ತಿವೆ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವಲ್ಲಿ ಈ ಮಕ್ಕಳಿಗೆ ಖಂಡಿತ ಕೇವಲ ಭಾಷೆ ಅಡ್ಡಿಪಡಿಸುವುದಿಲ್ಲ. ಬದಲಾಗಿ ಈ ಮಕ್ಕಳ ಭಾಷಾಜ್ಞಾನವನ್ನು ಮತ್ತಷ್ಟು ಉನ್ನತಗೊಳಿಸುತ್ತದೆ. ಇನ್ನು ಯುವಕರು ಅಥವಾ ಮುದುಕರ ವಿಷಯವನ್ನು ಮೇಲಿನ ಕನ್ನಡಪರ ಹೋರಾಟಗಾರರು ತಲೆಕೆಡಿಸಿಕೊಂಡಿಲ್ಲ. ಸೋ, ಅದರ ಬಗ್ಗೆ ಚರ್ಚೆ ನಮಗೂ ಬೇಡ.

ಇಷ್ಟು ಹೇಳಿ ಮುಗಿಸಿದರೆ ಸಾಕಾಗುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಮರ್ಶಿಸೋಣ. ಏನೆಂದರೆ ಈಗ ನಮ್ಮ ಮಕ್ಕಳಿಗೆ ಆಂಗ್ಲಭಾಷೆಯ ಗಂಧಗಾಳಿಯೂ ಇಲ್ಲ. ಎಂದು ಭಾವಿಸಿಕೊಳ್ಳೋಣ. ಆಗಲೂ ಹೇಗೇ ಕನ್ನಡ ಡಬ್ಬಿಂಗ್‌ ಅನಿವಾರ್ಯವಲ್ಲ ಎಂಬುದನ್ನು ಈಗ ನೋಡೋಣ.

ಪೋಗೋ ಚಾನೆಲ್‌ಅನ್ನೇ ಉದಾಹರಣೆಗೆ ತೆಗೆದು ಕೊಳ್ಳೋಣ. ಇಲ್ಲಿ ಭಿತ್ತರಿಸುವ ಒಂದು ಬಹು ಜನಪ್ರಿಯ ಕಾರ್ಯಕ್ರಮ ಮಿ. ಬೀನ್. ಈ ಕಾರ್ಯಕ್ರಮ ಹೇಗಿದೆ ಎಂದರೆ ಹಿಂದಿನ ದಶಕದಲ್ಲಿ ಬಹು ಜನಪ್ರಿಯವಾಗಿದ್ದ ಚಾರ್ಲಿಚಾಂಪ್ಲಿನ್ ಕಾರ್ಯಕ್ರಮದ ಹಾಗೇ ಇದೆ. ಎರಡರಲ್ಲೂ ಹಾಸ್ಯವೇ ಪ್ರಧಾನ. ಹಾಗೂ ಎರಡೂ ಮೂಖಚಿತ್ರಗಳು. ಇಲ್ಲಿ ಕಥಾನಾಯಕನು ಮಾತಾಡದೇ ಕೇವಲ ನಟನೆಯಿಂದಷ್ಟೇ ವೀಕ್ಷಕರನ್ನು ಮನರಂಜಿಸುತ್ತಾನೆ.
ಸೋ, ಇಲ್ಲಿ ಆಂಗ್ಲವೂ ಇಲ್ಲ, ಹಿಂದಿಯೂ ಇಲ್ಲ. ಇನ್ನು ಕನ್ನಡಮಕ್ಕಳಿಗೆ ಅನ್ಯಾಯವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇದೇ ಚಾನೆಲ್‌ನಲ್ಲಿ ಬರುವ ಮತ್ತೊಂದು ಕಾರ್ಯಕ್ರಮವನ್ನು ಗಮನಿಸೋಣ. ಅದೆಂದರೆ ಟಾಮ್‌ ಅಂಡ್‌ ಜರ್ರಿ. ಓಹ್. ಈ ಕಾರ್ಯಕ್ರಮವಂತೂ ವ್ಯಯಕ್ತಿಕವಾಗಿ ನನಗೆ ಬಲು ಅಚ್ಚುಮೆಚ್ಚು. ಇಲ್ಲಿ ಕೂಡ ಅಷ್ಟೇ, ಇಲ್ಲಿ ಬರುವ ಪ್ರಮುಖ ಪಾತ್ರಗಳೇ ಎರಡು ಮೂಖ ಪ್ರಾಣಿಗಳು. ಒಂದು ಬೆಕ್ಕು ಮತ್ತೊಂದು ಇಲಿ. ಕಾರ್ಯಕ್ರಮದಲ್ಲೂ ಸಹ ಈ ಪಾತ್ರಗಳು ಮೂಖವೇ. ಇಲ್ಲಿ ಅವುಗಳ ನಡುವಿನ ಚಿನ್ನಾಟ, ಜಗಳ, ಕಿತ್ತಾಟವೇ ಕಥಾವಸ್ತು. ಅಪರೂಪಕ್ಕೊಮ್ಮೆ ಮನೆಯೊಡತಿಯ ಅರಚಾಟ ಕೇಳಬಹುದು. ಆದರೆ ಆಕೆಯ ಮಾತು ಸ್ಪಷ್ಟವಾಗಿ ಆಂಗ್ಲದಲ್ಲಿಯೂ ಇರುವುದಿಲ್ಲ. ಹಾಗಾಗಿ, ಇಲ್ಲಿಯೂ ಕನ್ನಡ ಡಬ್ಬಿಂಗ್‌ ಮಾಡುವ ಪ್ರಶ್ನೇಯೇ ಹೇಳುವುದಿಲ್ಲ.
ವಾಸ್ತವದಲ್ಲಿ ಈ ಮೇಲೆ ತಿಳಿಸಿದ ಎರಡೂ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ಬಿಂಗ್‌ ಮಾಡುವುದಕ್ಕೆ ಅವಕಾಶವೂ ಇಲ್ಲ. ಏಕೆಂದರೆ ಭಾಷೆಯ ವಿಷಯದಲ್ಲಿ ಈ ಎರಡೂ ಕಾರ್ಯಕ್ರಮಗಳು ತಟಸ್ಥ.

ಈಗ ಪೋಗೋ ಚಾನಲ್‌ನಲ್ಲಿ ಪ್ರಸಾರವಾಗುವ ಮತ್ತೊಂದು ಜನಪ್ರಿಯ ಕಾರ್ಯಕ್ರಮವನ್ನು ವಿಮರ್ಶಿಸೋಣ. ಅಲ್ಲಿ ಬರುವ ಕೆಲವು ಮನರಂಜನಾತ್ಮಕ ಆಟಗಳು. ವ್ಹಾವ್. ಈ ಆಟಗಳನ್ನು ನೋಡಿದರೇ ನಮ್ಮ ದೇವೇಗೌಡರ ಮುಖದಲ್ಲಿಯೂ ನಗು ಚಿಮ್ಮಬಹುದು. ಏಕೆಂದರೆ ಈ ಆಟಗಳ ಪರಿಕಲ್ಪನೆಯೇ ಆ ರೀತಿ ಇದೆ. ಈ ಆಟದಲ್ಲಿಯೂ ಸಹ ಎಲ್ಲಿಯೂ ಭಾಷೆಯು ನಮಗೆ ಅಡ್ಡಿಯಾಗಲು ಸಾಧ್ಯವೇ ಇಲ್ಲ.

ಇನ್ನು ಇದೇ ಫೊಗೋ ಚಾನೆಲ್‌ನಲ್ಲಿ ಬರುವ ಮತ್ತೊಂದು ಜನಪ್ರಿಯ ಕಾರ್ಯಕ್ರಮವೆಂದರೆ ಕೆಲವು ಆಟಿಕೆಗಳನ್ನ ಅಥವಾ ಕೆಲವು ಸಣ್ಣಪುಟ್ಟ ವ್ಯೆಜ್ಞಾನಿಕ ಸಾಧನಗಳನ್ನು ಅಥವಾ ಯಂತ್ರಗಳನ್ನು ತಯಾರಿಸುವುದನ್ನು ತೋರಿಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ತಯಾರಿಕಾ ವಿಧಾನವನ್ನು ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿ ವಿವರಿಸುವುದು ಸತ್ಯ. ಹಾಗೆಂದ ಮಾತ್ರಕ್ಕೆ ಈ ಭಾಷೆಗಳೇ ಅಲ್ಲಿ ಜೀವಾಳವಲ್ಲ. ಏಕೆಂದರೆ ವಿಧಾನವನ್ನೂ ಸಹ ಟೀವೀ ಪರದೆಯ ಮೇಲೆ ಆತ ಸ್ಪಷ್ಟವಾಗಿ ವಿವರಿಸುತ್ತಾನಲ್ಲದೇ. ಮೂರ್ನಾಲ್ಕು ಬಾರಿ ರೀಪ್ಲೇ ಕೂಡ ಇರುತ್ತದೆ. ಎಲ್ಲಾ ಪರಿಕರಗಳನ್ನೂ ಆತ ಸ್ಪಷ್ಟವಾಗಿ ಪರದೆಯ ಮೇಲೆ ತೋರಿಸುತ್ತಾನೆ. ಉದಾಹರಣೆಗೆ ಬೆಂಕಿ ಪೆಟ್ಟಿಗೆಯನ್ನು ಬಳಸಿ ಏನನ್ನಾದರೂ ತಯಾರಿಸುತ್ತಿದ್ದರೆ ಆತ ಬೆಂಕಿಪೆಟ್ಟಿಗೆಯನ್ನೇ ತಂದು ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನೂ ಸಹ ಅಲ್ಲಿಯೇ ಮಾಡಿ ತೋರಿಸುತ್ತಿತ್ತಾನೆ.
ಹಾಗಾಗಿ ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಹ ಭಾಷೆಯ ಪಾತ್ರ ತೀರ ಕಡಿಮೆ ಅಥವಾ ನಗಣ್ಯವೆಂದೆ ಹೇಳಬಹುದು.


ಇನ್ನು ಡಿಸ್ಕವರಿ ಚಾನೆಲ್‌ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ನಿಜ ಹೇಳಬೇಕೆಂದರೆ ಇದೊಂದು ಕೇವಲ ಮಕ್ಕಳಿಗಾಗಿ ನಿರ್ಮಿಸಿರುವ ಚಾನೆಲ್‌ ಅಲ್ಲ. ಇಲ್ಲಿ ಯುವಕರು ಹಾಗೂ ವೃದ್ದರು ನೋಡಿದರೂ ಮೈನವಿರೇಳುವಂತಿರುವಂತ್ತಹ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಅನೇಕ ಭಾರಿ ಹೇಗಾಗುತ್ತದೆ ಎಂದರೆ ಮಕ್ಕಳಿರುವ ಪೋಷಕರು ತಮ್ಮ ಮಕ್ಕಳನ್ನು ಮಲಗಿಸಿ ನಂತರ ರಾತ್ರಿ ಅವರು ಮತ್ತೆ ನಿದ್ದೆಯಿಂದ ಎಚ್ಚರವಾದಾರು ಎಂಬುವ ಭಯದಿಂದ ಟೀವೀ ವಾಲ್ಯೂಮ್‌ ಮ್ಯೂಟ್‌ ಮಾಡಿಕೊಂಡಾದರೂ ಸಹ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಅಂದರೆ ಇಲ್ಲಿ ಭಾಷೆ ಅಥವಾ ಕಾರ್ಯಕ್ರಮದ ಸಂಭಾಷಣೆಗಿಂತ ಅಲ್ಲಿ ಪ್ರಸಾರವಾಗುವ ದೃಶ್ಯಗಳೇ ನಮ್ಮನ್ನ ಸೆಳೆಯುತ್ತವೆ. ಹಾಗಾಗಿ ಕನ್ನಡಮಕ್ಕಳು ಭಾಷೆಯ ಜ್ಞಾನವಿಲ್ಲ ಎನ್ನುವ ಕೊರಗು ಇಲ್ಲಿಯೂ ಕಾಣಿಸುವುದಿಲ್ಲ.

ಇನ್ನು ಮುಂದಿನ ವಿಶ್ಲೇಷಣೆ ಚಲನಚಿತ್ರಗಳತ್ತ. ಅವತಾರ್‌ ಚಿತ್ರವನ್ನೇ ತೆಗೆದುಕೊಳ್ಳೋಣ. ಈ ಚಿತ್ರದ ಶೇ.60ರಷ್ಟು ಭಾಗ ಕೇವಲ ಕಂಪ್ಯೂಟರ್ ಗ್ರಾಫಿಕ್ಸ್. ಇನ್ನು ಇದರ ಕಥೆಯೋ ಇನ್ನೂ ಶತಮಾನದ ಆಚೆಗಿನ ಭವಿಷ್ಯಕ್ಕೆ ಸಂಭಂದಿಸಿದ್ದು. ಈ ಚಿತ್ರವನ್ನು ಅರ್ಥಮಾಡಿಕೊಳ್ಳಲು ಕೇವಲ ಭಾಷೆ ಬಂದರಷ್ಟೇ ಸಾಲದು. ಜೊತೆ ಜೊತೆಗೆ ವಿಜ್ಞಾನ ಹಾಗೂ ತಂತ್ರಜ್ಞಾದ ಬೆಳವಣಿಗೆಯಲ್ಲಿಯೂ ಸಹ ತಕ್ಕಮಟ್ಟಿನ ಜ್ಞಾನ ಅತೀ ಅವಶ್ಯಕ. ಈ ಚಿತ್ರದ ಚಿತ್ರಕಥೆಯನ್ನು ಸಿದ್ದಪಡಿಸಿಟ್ಟುಕೊಂಡು ಸುಮಾರು ಹತ್ತು ಹನ್ನೆರಡು ವರ್ಷ ನಿರ್ದೇಶಕರು ಕಾಯುತ್ತಾ ಕೂತಿದ್ದರಂತೆ. ಏಕೆಂದರೆ ಚಿತ್ರದ ನಿರ್ಮಾಣಕ್ಕೆ ಅವಶ್ಯಕವಾಗಿದ್ದ ತಂತ್ರಜ್ಞಾನವೇ ಇನ್ನೂ ಲಭ್ಯವಿರಲಿಲ್ಲವಂತೆ. 900 ಕೋಟಿ ವ್ಯಯಿಸಿ ಕನ್ನಡದಲ್ಲಿ ಇದೇ ಚಿತ್ರವನ್ನು ನಿರ್ಮಿಸುವುದು ವಾಸ್ತವದಲ್ಲಿ ಸಾದ್ಯವಿಲ್ಲದಿರಬಹುದು ಒಪ್ಪಿಕೊಳ್ಳೋಣ. ಹಾಗೆಂದ ಮಾತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನಗಳು ನಡೆದೇ ಇಲ್ಲವೇ. ಇಲ್ಲ ಎಂದು ಹೇಳಿ, ದಯವಿಟ್ಟು ಕನ್ನಡದಲ್ಲಿರುವ ಕೆಲವರಾದರೂ ಕ್ರಿಯಾತ್ಮಕ ನಿರ್ದೇಶಕರನ್ನು ಅವಹೇಳನ ಮಾಡಬೇಡಿ.

2001ರಲ್ಲಿ ತೆರೆಕಂಡ ಉಪೇಂದ್ರ ಹಾಗೂ ಅನಂತನಾಗ್ ಅಭಿನಯದ ಕನ್ನಡದ ಹಾಲಿವುಡ್‌ ಚಿತ್ರ ನಿಮಗೆ ನೆನಪಿಲ್ಲವೇ? ಅದರಲ್ಲಿಯೂ ವಿಜ್ಞಾನ ಹಾಗೂ ತಂತ್ರಜ್ಞಾನ ಹೇಗೆಲ್ಲ ಅಭಿವೃದ್ದಿ ಪಡಿಸಬಹುದು ಎನ್ನುವ ಸಂದೇಶ ಇರಲಿಲ್ಲವೇ? ಆದರೂ ಆ ಚಿತ್ರ ಸೋತಿತು. ಕಾರಣ ಏನಿರ ಬಹುದು ಆಲೋಚಿಸಿದ್ದೀರ? ಅಷ್ಟೇ ಏಕೆ ಸದ್ಯಕ್ಕೆ ಭಾರೀ ಪ್ರಚಾರದಲ್ಲಿರುವ ಬಹುಕೋಟಿ ವೆಚ್ಚದ ನಮ್ಮ ರಜನಿಕಾಂತ್‌ ಅಭಿನಯದ ತಮಿಳಿನ ಎಂಡ್ರಿಯನ್ ಚಿತ್ರದ ಮೂಲ ಕಥೆಯೂ ಸಹ ಇದೇ ಹಾಲಿವುಡ್‌ ಚಿತ್ರದ್ದು ಎನ್ನುವ ಸುದ್ದಿ ಗುಲ್ಲೆದ್ದಿದೆ. ಹೌದಲ್ಲವೇ?

ಇದಕ್ಕೆ ಮತ್ತಷ್ಟು ಉದಾಹರಣೆ ನೀಡಬಹುದು, ರಮೇಶ್‌ ಅರವಿಂದ್‌ ಅಭಿನಯದ ಪ್ರತ್ಯರ್ಥ ಹಾಗೂ ಡೈನಮಿಕ್ ಹೀರೂ ದೇವರಾಜ್‌ ಅಭಿನಯದ ಮಾನವ 2020. ಚಿತ್ರಗಳನ್ನು ನೀವು ನೋಡಿಲ್ಲವೇ? ಈ ಚಿತ್ರಗಳೂ ಸಹ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದ್ದವಲ್ಲವೇ? ಆದರೂ ಈ ಚಿತ್ರಗಳು ಯಶಸ್ಸು ಗಳಿಸಲಿಲ್ಲ. ಅಥವಾ ಜನರು ಈ ಚಿತ್ರಗಳತ್ತ ಒಲವು ತೋರಲಿಲ್ಲ.

ಇನ್ನು ಅಣ್ಣಾವ್ರು ಅಭಿನಯದ ಜೇಮ್ಸ್ ಬಾಂಡ್‌ ಶೈಲಿಯ ಆಪರೇಶನ್ ಡೈಮಂಡ್‌ ರಾಕೆಟ್, ಸಿ, ಐ, ಡಿ 999 ಈ ಸರಣಿಯ ಚಿತ್ರಗಳು ಅಂದಿನ ಕಾಲಕ್ಕೆ ನಮ್ಮ ನಿರ್ದೇಶಕರು ತೋರಿಸಿದ ಧೈರ್ಯವಲ್ಲವೇ? ಆದರೆ ಒಮ್ಮೆ ರಾಜ್‌ಕುಮಾರ್ ಅವರೇ ಒಂದು ತುಂಬಿದ ಸಭೆಯಲ್ಲಿ ತಾವು ಆ ಜೇಮ್ಸ್ ಭಾಂಡ್‌ ಶೈಲಿಯ ಚಿತ್ರಗಳನ್ನು ಒಪ್ಪಿಕೊಳ್ಳಬಾರದಿತ್ತು ಎಂದಿದ್ದರು.

ನಮ್ಮ ಚಿತ್ರಪ್ರೇಮಿಗಳು ಈ ಮಾದರಿಯ ಚಿತ್ರಗಳನ್ನು ಅದೇಕೋ ಆಲಂಗಿಸಿ ಬರಮಾಡಿಕೊಳ್ಳಲಿಲ್ಲ. ಇದು ಕೇವಲ ಕಾಲ್ಪನಿಕ ಎಂದೆನೆಸಿ ಸತ್ಯಾಂಶಕ್ಕೆ ದೂರದಾದದ್ದು ಎಂದೆನಿಸಿ ನಮ್ಮ ಜನಗಳು ಈ ಮಾದರಿಯ ಚಿತ್ರಗಳತ್ತ ಒಲವು ತೋರಿಸಲೇ ಇಲ್ಲವೆನಿಸುತ್ತದೆ.

ಇನ್ನು ನೀವು ಹೇಳುವ ಅವತಾರ್, ಜುರಾಸಿಕ್‌ ಪಾರ್ಕ್ ಈ ಚಿತ್ರಗಳನ್ನು ನಮ್ಮ ಜನ ಜೀರ್ಣಿಸಿಕೊಂಡಾರೆಯೇ? ಇಲ್ಲಿವರೆಗಿನ ಕನ್ನಡಚಿತ್ರರಂಗದ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ  ಈ ಚಿತ್ರಗಳು ಕನ್ನಡದಲ್ಲೇ ಬಿಡುಗಡೆ ಆದರೂ ನಮ್ಮವರು ಪ್ರೋತ್ಸಾಹಿಸುತ್ತಾರೆ ಎನ್ನುವುದು ಕೇವಲ ಹಾಳೆಯ ಮೇಲಿನ ವಾದವಾಗುವುದು ಅಷ್ಟೇ.

ಈಗಲೂ ತಮಗೆ ಚಿತ್ರದ ಸಂದೇಶ ಮುಖ್ಯವಲ್ಲ ಅಲ್ಲಿ ಬರುವ ದೃಶ್ಯಾವಳಿಗಳು, ಪಾತ್ರಗಳು ಹಾಗೂ ನಿರ್ದೇಶಕನ ಕೈಚಳಕವಷ್ಟೇ ಮುಖ್ಯವೆನ್ನಿಸಿರಬಹುದು. ಹಾಗಿದ್ದರೆ ಆಂಗ್ಲಭಾಷೆಯಲ್ಲಿಯೇ ಆ ಚಿತ್ರಗಳನ್ನು ವೀಕ್ಷಿಸಲು ಬೇಡ ಎಂದು ನಿಮ್ಮನ್ನು ಯಾರೂ ಕಟ್ಟಿಹಾಕುತ್ತಿಲ್ಲ. ಅಲ್ಲವೇ?.

ಈಗಲೂ ಅಲ್ಲೊಮ್ಮೆ ಇಲ್ಲೊಮ್ಮೆ ಯಾವುದೋ ಕೆಲವು ಕಾರ್ಯಕ್ರಮಗಳಿಗೆ ಡಬ್ಬಿಂಗ್‌ ಬೇಕೇ ಬೇಕು ಎಂದು ನಿಮಗನ್ನಿಸಿದರೆ, ಖಂಡಿತ ನೀವೂ ಸಹ ಇನ್ನೊಂದು ಭಾಷೆಯನ್ನು ಕಲಿತು ಕೊಳ್ಳಲು ಸಂಪೂರ್ಣ ಸ್ವತಂತ್ರರು ಎಂಬುದನ್ನು  ಜ್ಞಾಪಿಸಲಿಚ್ಚಿಸುತ್ತೇನೆ.

ಕಡೆಯದಾಗಿ ತಿಳಿಸುವುದೇನೆಂದರೆ, ಕನ್ನಡಕ್ಕೆ ಡಬ್ಬಿಂಗ್‌ ಎಷ್ಟು ಅನಿವಾರ್ಯ ಎಂಬುದನ್ನು ಮನಗಾಣಲು ನಮ್ಮ ಕೆಲವು ಸ್ನೇಹಿತರು ನೀಡುತ್ತಿರುವ ಉದಾಹರಣೆಗಳು ನನಗೇಕೋ ಬಾಲಿಶ ಎನಿಸಿದವು. ಇದಕ್ಕಿಂತಲೂ ಗಂಭೀರವಾದ ಅನಿವಾರ್ಯತೆಗಳನ್ನು ಇವರು ಮನಗಂಡಿರಬಹುದು. ಆದರೆ ಉದಾಹರಣೆಗೆಂದಷ್ಟೇ ಈ ಮೇಲಿನ ಅಂಶಗಳನ್ನು ಸೂಚಿಸುತ್ತಿರಬಹುದು. ಯಾವುದಕ್ಕೂ ಅವರು ನೀಡುವ ಕಾರಣಗಳು ಮನಮುಟ್ಟುವಂತಿಲ್ಲ ಎನ್ನಿಸಿದ್ದರಿಂದ ಈ ವಿಶ್ಲೇಷಣೆಗೆ ಮುಂದಾಗಬೇಕಾಯಿತು. ಇದು ವಿಶ್ಲೇಷಣೆ ಅಷ್ಟೇ, ನನ್ನ ತೀರ್ಮಾನವಲ್ಲ. Read More!

ದಾನ್ ದಾನ್ ಪರ್ ಲಿಖಾ ಹೈ ತೇರಾ ನಾಮ್!

ಶ್ರೀ ಮಧುಸೂದನ ಪೆಜತ್ತಾಯರ ಸ್ಮೃತಿಪಟಲದಿಂದ...
ಕ್ರಿ.ಶ. ೧೯೫೬ನೇ ಇಸವಿ ಇರಬೇಕು. ಆಗಷ್ಟೇ ಉಡುಪಿಯ ಬೋರ್ಡ್ ಹೈಸ್ಕೂಲ್‌ನ ಆರನೇ ತರಗತಿಗೆ ಸೇರಿದ್ದೆ. ನಮ್ಮ ಮನೆಯಿಂದ ಸ್ಕೂಲ್ ಎರಡು ಮೈಲಿ ದೂರ. ನಮ್ಮಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨-೩೦ ರಿಂದ ೨-೦೦ ಗಂಟೆಯವರೆಗೆ ಇತ್ತು. ಶಾಲಾದಿನಗಳಲ್ಲಿ ಲಗುಬುಗೆಯಿಂದ ಮನೆಗೆ ನಡೆದು ಬಂದು ಬೇಗಬೇಗನೇ ಮೂಗು ಬಾಯಿಯಿಂದ ಊಟ ಮುಕ್ಕಿ ಸಮಯಕ್ಕೆ ಸರಿಯಾಗಿ ಪುನಃ ಸ್ಕೂಲ್ ಸೇರುತ್ತಾ ಇದ್ದೆ!
ಸೈಕಲ್ ಕಲಿತರೆ ನನಗೆ ತುಂಬಾ ಅನುಕೂಲ ಆಗಬಹುದೆಂಬ ಆಸೆಯಿಂದ ಪ್ರತೀ ಸಂಜೆ ಬಾಡಿಗೆಯ ಸೈಕಲ್ ಪಡೆದು ಕಲಿಯ ತೊಡಗಿದೆ. ಮೊದಲ ದಿನವೇ ನನ್ನ ಬಾಡಿಗೆಯ ಸೈಕಲ್ ಪಲ್ಟಿ ಹೊಡೆದು ಕಾಲಿಗೆ ಗಾಯ ಮಾಡಿಕೊಂಡೆ. ಕುಂಟುತ್ತಾ ನಡೆಯುತ್ತಿದ್ದ ನನಗೆ ಅಮ್ಮ ನಾಲ್ಕಾಣೆಯ ಪಾವಲಿ (ನಾಣ್ಯ) ಕೊಟ್ಟು ನಮ್ಮ ಹೈಸ್ಕೂಲ್ ಪಕ್ಕದಲ್ಲೇ ಇದ್ದ ಆನಂದ ಭವನ ಹೋಟೆಲಿನಲ್ಲಿ “ಪ್ಲೇಟ್ ಊಟ ಮಾಡು” ಎಂದು ಹೇಳಿದ್ದರು.
ನನಗೆ ಸಂಭ್ರಮವೋ ಸಂಭ್ರಮ!
ಆ ದಿನಗಳಲ್ಲಿ ನಮಗಾರಿಗೂ ‘ಪಾಕೆಟ್ ಮನಿ’ ಕೊಡುವ ಪದ್ಧತಿ ಇರಲಿಲ್ಲ. ಅಪರೂಪದಲ್ಲಿ, ಮಧ್ಯಾಹ್ನ ಮನೆಗೆ ಊಟಕ್ಕೆ ಬರಲಾಗದ ಇಂತಹಾ ಸಂದರ್ಭಗಳಲ್ಲಿ ಮಾತ್ರ ಮಧ್ಯಾಹ್ನದ ಊಟಕ್ಕೆಂದು ಪಾಕೆಟ್ ಮನಿ ನನಗೆ ಸಿಗುತ್ತಾ ಇತ್ತು.
ಆಗ ಪ್ಲೇಟ್ ಊಟಕ್ಕೆ ಬರೇ ನಾಲ್ಕಾಣೆ (=೨೫ ಪೈಸೆ) ಫುಲ್ ಊಟಕ್ಕೆ ಎಂಟಾಣೆ (= ೫೦ ಪೈಸೆ)! ಫುಲ್ ಊಟ ಅಂದರೆ ಊಟ ಮಾಡಿದಷ್ಟೂ ಅನ್ನ ಹಾಗೂ ವ್ಯಂಜನಗಳು! ಶಾಲಾ ಮಕ್ಕಳಾದ ನಮಗೆ ಆನಂದ ಭವನದ ಪ್ಲೇಟ್ ಊಟವೇ ಹೆಚ್ಚಾಗುತ್ತಾ ಇತ್ತು.
ಒಂದು ದಿನ ಆನಂದ ಭವನದ ಹತ್ತಿರ ಬರುತ್ತಲೇ ಪಕ್ಕದ ಬೀಡಾ ಅಂಗಡಿಯಲ್ಲಿ ತೂಗು ಹಾಕಿದ್ದ ಚಂದ್ರಬಾಳೆಯ ಹಣ್ಣಿನ ಗೊನೆ ಕಂಡಿತು. ಆ ಗೊನೆಯಲ್ಲಿ ನಸುಗೆಂಪು ಬಣ್ಣದ ಸುಮಾರು ಒಂದೊಂದು ಪೌಂಡ್ (ಸುಮಾರು ೪೫೪ ಗ್ರಾಂ) ತೂಗುವ ಮಾಗಿದ ಚಂದ್ರ ಬಾಳೆಯ ಹಣ್ಣುಗಳು ತೂಗಾಡುತ್ತಿದ್ದುವು. ಕ್ರಯ ಕೇಳಲು ಪ್ರತೀ ಬಾಳೆಹಣ್ಣಿಗೆ ಎರಡಾಣೆ (=೧೨ ಪೈಸೆ) ಅಂತ ಅಂಗಡಿಯ ಯಜಮಾನರು ಹೇಳಿದರು.
ನನಗೆ ಈ ಅಪರೂಪದ ಚಂದ್ರಬಾಳೆಹಣ್ಣು ಬಹು ಇಷ್ಟ. ಅದರ ಪರಿಮಳ ಮತ್ತು ಸ್ವಾದಗಳೇ ವಿಶಿಷ್ಟ. ಅದಲ್ಲದೇ, ಒಂದು ಬಾಳೆಯ ಹಣ್ಣು ತಿಂದರೆ ನನ್ನ ಹೊಟ್ಟೆಯೇ ತುಂಬುವಂತಿತ್ತು!
ಬಾಳೆಹಣ್ಣು ಕಂಡೊಡನೆಯೇ, ನನ್ನ ಮಧ್ಯಾಹ್ನದ ಊಟದ ‘ಮೆನು’ ಬದಲಾಯಿತು. “ಇಂದು ಮಧ್ಯಾಹ್ನದ ಊಟದ ಬದಲಿಗೆ ಎರಡಾಣೆ ಕೊಟ್ಟು ಒಂದು ಮಸಾಲೆ ದೋಸೆ ತಿಂದು, ಉಳಿಯುವ ಎರಡಾಣೆಗಳನ್ನು ಸಾಯಂಕಾಲದ ಚಂದ್ರ ಬಾಳೆಚಿi ಹಣ್ಣಿನ ಫಲಾಹಾರಕ್ಕೆ ಉಳಿಸಿಕೊಂಡರೆ ಹೇಗೆ?” ಎಂಬ ಆಲೋಚನೆ ಬಂತು.
ಆನಂದ ಭವನದ ಮಸಾಲೆ ದೋಸೆ ಇಡೀ ಉಡುಪಿಗೇ ಪ್ರಸಿದ್ಧ.
ಉಡುಪಿಯ ದೇವಸ್ಥಾನಗಳ ಸುತ್ತಿನಲ್ಲಿರುವ ರಥಬೀದಿಯ ಉಪಾಹಾರ ಗೃಹಗಳಲ್ಲಿ ನೀರುಳ್ಳಿ ಬಳಸದೇ ಬರೇ ಇಂಗಿನ ಒಗ್ಗರಣೆ ಸೇರಿಸಿದ ಆಲೂಗೆಡ್ಡೆಯ ಪಲ್ಯವನ್ನು ಹಾಕಿ ಘಮಘಮ ಮಸಾಲೆ ದೋಸೆ ತಯಾರಿಸುವ ಕ್ರಮ ಅಂದೂ ಇತ್ತು, ಆ ಕ್ರಮ ಇಂದಿಗೂ ಇದೆ.
ಈ ಈರುಳ್ಳಿ ರಹಿತ ಮಸಾಲೆ ದೋಸೆಗಳು ಯಾತ್ರಾರ್ಥಿಗಳ ಮತ್ತು ಸ್ಥಳೀಯ ಜನರ ಅಭಿರುಚಿಗೆ ತಕ್ಕಂತೆ ಇಂದಿಗೂ ಬದಲಾಗದೇ ಉಳಿದಿವೆ. ಸ್ಥಳೀಯ ಜನರು ಮತ್ತು ಯಾತ್ರಾರ್ಥಿಗಳು ಈ ವಿಶಿಷ್ಟ ಮಸಾಲೆ ದೋಸೆಗಳ ರುಚಿಗೆ ಇಂದಿಗೂ ಮುಗಿಬೀಳುತ್ತಾರೆ.
ಈರುಳ್ಳಿ ಮತ್ತು ಬೆಳ್ಳುಳ್ಳಿಯ ರುಚಿಗೆ ಆಗಲೇ ಮಾರುಹೋಗಿದ್ದ ನಾವು, ಉಡುಪಿಯ ರಥಬೀದಿಯ ಉಪಹಾರಗೃಹಗಳ ಮಸಾಲೆ ದೋಸೆಗಳನ್ನು “ಮಡಿ ಮಸಾಲೆ ದೋಸೆ” ಅಂತ ಲೇವಡಿ ಮಾಡುತ್ತಾ ಇದ್ದೆವು!
ಆನಂದ ಭವನದ ಗರಿ ಗರಿ ದೋಸೆಗಳ ಮೇಲೆ ಕೆಂಪು ಕೆಂಪು ಖಾರದ ಮೆಣಸುಯುಕ್ತವಾದ ಬೆಳ್ಳುಳ್ಳಿಯ ಚಟ್ನಿ ಹಚ್ಚಿ ಈರುಳ್ಳಿ ಮತ್ತು ಆಲೂಗೆಡ್ಡೆಯ ಪಲ್ಯ ಪೇರಿಸಿ ಮಡಚಿ ಕೊಡುತ್ತಾ ಇದ್ದರು.
ಹಾಗಾಗಿ, ನಮಗೆ ಆನಂದ ಭವನದ ಮಸಾಲೆ ದೋಸೆ ಬಹಳ ಇಷ್ಟ.
ಎರಡಾಣೆ ಬೆಲೆಯ ಹನ್ನೆರಡು ಇಂಚು ಅಗಲದ ಒಂದು ಮಸಾಲೆ ದೋಸೆ ತಿಂದು ನೀರು ಕುಡಿದಾಗ ಮಧ್ಯಾಹ್ನದ ಹಸಿವು ಮಂಗಮಾಯ!
ಆ ಸಂಜೆ ಶಾಲೆ ಬಿಟ್ಟೊಡನೆ ಎರಡು ಆಣೆ ಕೊಟ್ಟು ಚೆನ್ನಾಗಿ ಮಾಗಿದ ಒಂದು ಚಂದ್ರಬಾಳೆಯ ಹಣ್ಣನ್ನು ಖರೀದಿಸಿದೆ. ಅದನ್ನು ನನ್ನ ಸ್ಕೂಲ್ ಬ್ಯಾಗ್‌ನ ಒಳಗೆ ಸೇರಿಸಿದೆ. ಮನೆಗೆ ಹೋಗುತ್ತಾ, ಮುಂದೆ ಸಿಗುವ ನಿರ್ಜನವಾದ ದಾರಿಯಲ್ಲಿ, ನಿಧಾನವಾಗಿ ಅದನ್ನು ಆಸ್ವಾದಿಸಿ ತಿನ್ನುವ ಯೋಜನೆ ಹಾಕಿದೆ.
ಮನೆಯ ದಾರಿಯಲ್ಲಿ ಸಾಗುತ್ತಾ ಸಾಗುತ್ತಾ ಇರುವಂತೆ ಜನಸಂದಣಿ ಕಡಿಮೆ ಆಯಿತು. ಬಾಳೆಯ ಹಣ್ಣಿನ ಪರಿಮಳ ಮೂಗಿಗೆ ಬಡಿದು ನನ್ನ ಹಸಿವು ಮತ್ತಷ್ಟು ಹೆಚ್ಚಿತು.
ನನ್ನ ಮುಂದುಗಡೆ, ರಸ್ತೆಯ ಬಲಬದಿಯಲ್ಲಿ ಒಂದು ದನ ನೆರಳಿನಲ್ಲಿ ಮೆಲುಕು ಹಾಕುತ್ತಾ ಮಲಗಿತ್ತು. ಈ ದನಕ್ಕೆ ಬಾಳೆಹಣ್ಣಿನ ಸಿಪ್ಪೆ ತಿನ್ನಲು ಕೊಟ್ಟು ನಾನು ಬಾಳೆಯ ಹಣ್ಣನ್ನು ನಿಧಾನವಾಗಿ, ಆಸ್ವಾದಿಸಿ ತಿನ್ನುವ ಆಲೋಚನೆ ಮಾಡಿದೆ.
ಹಣ್ಣನ್ನು ನಿಧಾನವಾಗಿ ಸುಲಿಯಲಾರಂಬಿಸಿದೆ.
ಬಾಳೆಯ ಹಣ್ಣಿನ ತಿರುಳನ್ನು ಬಲಗೈ ಬೆರಳುಗಳಲ್ಲಿ ಭದ್ರವಾಗಿ ಹಿಡಿದು ಸಿಪ್ಪೆಯನ್ನು ಬೇರ್ಪಡಿಸಿದೆ.
ಆ ನಂತರ ಸಿಪ್ಪೆಯನ್ನು ದನದ ಕಡೆಗೆ ಎಸೆದೇ ಬಿಟ್ಟೆ!
ಆಗಲೇ ದೊಡ್ದ ಅಚಾತುರ್ಯ ನಡೆದಿತ್ತು!!
“ದೇವರೇ! ನೀನು ಯಾಕೆ ನನ್ನನ್ನು ಎಡಚನನ್ನಾಗಿ ಮಾಡಲಿಲ್ಲ?” ಅಂತ ಹಲುಬುವಷ್ಟು ದೊಡ್ದ ತಪ್ಪನ್ನು ಮಾಡಿಬಿಟ್ಟಿದ್ದೆ!!!
ಬಲಗೈ ಬಂಟನಾದ ನಾನು ಬಲಗೈಯ್ಯಲ್ಲಿ ಇದ್ದ ಕದಳೀ ಫಲದ ತಿರುಳನ್ನು ದನದ ಮುಂದೆ ಎಸೆದು, ಎಡಕೈಯ್ಯಲ್ಲಿ ಇದ್ದ ಸಿಪ್ಪೆಯನ್ನು ನನ್ನ ಬಾಯಿಗೆ ಕೊಂಡೊಯ್ದಿದ್ದೆ!!!!
ಅಷ್ಟೊತ್ತಿಗಾಗಲೇ ಆ ದನವು ಮಲಗಿದ್ದಲ್ಲಿಂದಲೇ ಕತ್ತು ನೀಡಿ ಬಾಳೆಯ ಹಣ್ಣನ್ನು ಸ್ವಾಹಾ ಮಾಡಿತ್ತು!
ನನ್ನ ಕೈಯ್ಯಲ್ಲಿ ಉಳಿದಿದ್ದ ಚಂದ್ರಬಾಳೆಯ ಹಣ್ಣಿನ ಸಿಪ್ಪೆಯನ್ನೇ ಒಂದು ಕ್ಷಣ ನಿರಾಸೆಯಿಂದ ದಿಟ್ಟಿಸಿ, ಅದನ್ನೂ ಆ ದನದ ಕಡೆಗೆ ಎಸೆದೆ!!
ನನಗೆ ಅಂದು ಆ ಚಂದದ ಬಾಳೆಯ ಹಣ್ಣು ತಿನ್ನುವ ಯೋಗ ಇರಲಿಲ್ಲ!!!
ಅದನ್ನು ತಿನ್ನುವ ಯೋಗ ಅಂದು ಖಂಡಿತವಾಗಿ ಆ ದನಕ್ಕೆ ಬರೆದಿತ್ತು!
ಈ ಮರೆಯಲಾರದ ಸಂಗತಿಯನ್ನು ಇಂದು ನೆನೆದಾಗ “ದಾನ್ ದಾನ್ ಪರ್ ಲಿಖಾಹೈ ತೇರೇ ನಾಮ್!” ಎಂಬ ಗಾದೆ ನೆನಪಾಗುತ್ತೆ!
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. 'ರೈತನಾಗುವ ಹಾದಿಯಲ್ಲಿ' ಎಂಬ ಕನ್ನಡ ಪುಸ್ತಕವೂ ಪ್ರಕಟವಾಗುವುದರಲ್ಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ Read More!